ಬೆಳಗಾವಿ: ಯಾವುದೇ ಕಾರಣಕ್ಕೂ ಸಚಿವ ಕೆ.ಎಸ್. ಈಶ್ವರಪ್ಪ ಅವರು ರಾಜೀನಾಮೆ ಕೊಡಬಾರದು ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರು ಈಶ್ವರಪ್ಪ ಅವರ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು. ಕಾಮಗಾರಿಗೆ ತನ್ನದೆ ಆದ ಪ್ರಕ್ರಿಯೆ ಇದೆ. ಟೆಂಡರ್ ಆಗಬೇಕು. ಜಾಹೀರಾತು ನೀಡಬೇಕು. ಸರ್ಕಾರದಿಂದ ಕಾರ್ಯಾದೇಶ ಆಗಬೇಕು ಹೀಗೆ... ಹಲವು ಪ್ರಕ್ರಿಯೆಗಳಿವೆ. ಈ ಪ್ರಕರಣದಲ್ಲಿ ಇದ್ಯಾವುದೂ ನಡೆದೇ ಇಲ್ಲ. ಕಾಂಗ್ರೆಸ್ಸಿನವರು ಈಶ್ವರಪ್ಪ ಮೇಲೆ ಮಾಡುತ್ತಿರುವ ಆಪಾದನೆ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದರು.
ಸಚಿವ ಈಶ್ವರಪ್ಪ ವಿರುದ್ಧ ಏನೂ ಪುರಾವೆ ಇಲ್ಲದೆ ಆಪಾದನೆ ಮಾಡುವುದು ಸರಿಯಲ್ಲ. ಯಾರೋ ಒಬ್ಬರು ಬಂದು ಆಪಾದನೆ ಮಾಡಿದ ತಕ್ಷಣ ಯಾವ್ಯಾವುದಕ್ಕೊ ಜೋಡಿಸುವುದು ಸರಿಯಲ್ಲ ಎಂದರು.
ಸಂತೋಷ್ ನಮ್ಮ ಕಾರ್ಯಕರ್ತ ಇರಬಹುದು. ಅಂತಹ ಸಾಕಷ್ಟು ಜನ ಇರುತ್ತಾರೆ. ಆದರೆ, ಇಷ್ಟು ಹಣ ಕೊಡುವುದಿತ್ತು ಎನ್ನುವುದು ಸರಿಯಲ್ಲ. ಪೊಲೀಸರು ಎಫ್ಐಆರ್ ಮಾಡಿದ್ದಾರೆ. ತನಿಖೆ ವೇಳೆ ಸತ್ಯಾಸತ್ಯತೆ ಹೊರಬರುತ್ತದೆ. ಪೊಲೀಸರು ತನಿಖೆ ಮಾಡಿ ವರದಿ ಸಲ್ಲಿಸುತ್ತಾರೆ. ಕಾನೂನಿನ ಎದುರು ಯಾರೂ ದೊಡ್ಡವರಲ್ಲ' ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.