ADVERTISEMENT

ಬೆಳಗಾವಿ| ಸಾರಿಗೆ ಸಂಸ್ಥೆಗೂ ತಟ್ಟಿದ ರೈತರ ಹೋರಾಟದ ಬಿಸಿ: ₹2.04 ಕೋಟಿ ಆದಾಯ ನಷ್ಟ

ಇಮಾಮ್‌ಹುಸೇನ್‌ ಗೂಡುನವರ
Published 8 ನವೆಂಬರ್ 2025, 4:16 IST
Last Updated 8 ನವೆಂಬರ್ 2025, 4:16 IST
<div class="paragraphs"><p> ರೈತರ ಪ್ರತಿಭಟನೆ</p></div>

ರೈತರ ಪ್ರತಿಭಟನೆ

   

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಒಂದು ವಾರದಿಂದ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಬಿಸಿ ಸಾರಿಗೆ ಸಂಸ್ಥೆಗೂ ತಟ್ಟಿದೆ. 

ಪ್ರತಿಭಟನೆ, ರಸ್ತೆತಡೆ, ಬಂದ್‌ ಮತ್ತಿತರ ಕಾರಣಕ್ಕೆ ಬಸ್‌ಗಳ ಕಾರ್ಯಾಚರಣೆ ಸರಿಯಾಗಿ ನಡೆಯದಿರುವುದು, ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಮತ್ತಿತರ ಕಾರಣಕ್ಕೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗಕ್ಕೆ ₹1.76 ಕೋಟಿ, ಬೆಳಗಾವಿ ವಿಭಾಗಕ್ಕೆ ₹28 ಲಕ್ಷ ಸೇರಿದಂತೆ ಒಟ್ಟು ₹2.04 ಕೋಟಿ ಆದಾಯ ನಷ್ಟವಾಗಿದೆ.

ADVERTISEMENT

ಕೆಲ ಮಾರ್ಗಗಳಲ್ಲಿ ಬಸ್‌ ಸಂಚಾರ ಸ್ಥಗಿತವಾಗಿ ಪ್ರಯಾಣಿಕರ ಪರದಾಟ ಮುಂದುವರಿದಿದೆ.

‘ಚಿಕ್ಕೋಡಿ ವಿಭಾಗದಲ್ಲಿ ಪ್ರತಿದಿನ 669 ಬಸ್‌ ಕಾರ್ಯಾಚರಣೆ ಮಾಡುತ್ತವೆ. ಹೋರಾಟದಿಂದ ಎಲ್ಲ ಬಸ್‌ ಕಾರ್ಯಾಚರಣೆ ಮಾಡುತ್ತಿಲ್ಲ. ಮಾರ್ಗ ಬದಲಾವಣೆ ಮಾಡಿ ಓಡಿಸಿದರೂ ಹೆಚ್ಚಿನ ಪ್ರಯಾಣಿಕರಿಲ್ಲ. 2025ರ ಅಕ್ಟೋಬರ್‌ನಲ್ಲಿ ಬಸ್‌ಗಳ ಕಾರ್ಯಾಚರಣೆಯಿಂದ ದಿನಕ್ಕೆ ₹1.30 ಕೋಟಿ ಆದಾಯ ಬರುತ್ತಿತ್ತು. ಗುರುವಾರ ₹84 ಲಕ್ಷವಷ್ಟೇ ಬಂದಿದೆ’ ಎಂದು ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗೀಯ ಸಂಚಾರ ಅಧಿಕಾರಿ ಎ.ಆರ್‌.ಛಬ್ಬಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಿರೀಕ್ಷಿತ ಆದಾಯವಿಲ್ಲ

‘ಬೆಳಗಾವಿ ವಿಭಾಗದಲ್ಲಿ ನಿತ್ಯ 640 ಬಸ್‌ ಕಾರ್ಯಾಚರಣೆ ಮಾಡುತ್ತವೆ. ರೈತರ ಹೋರಾಟದ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳಲ್ಲಿ ಬಸ್‌ಗಳ ಕಾರ್ಯಾಚರಣೆಗೆ ತೊಡಕಾಗಿದ್ದು, ನಿರೀಕ್ಷಿತ ಆದಾಯ ಬರುತ್ತಿಲ್ಲ’ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್‌.ಗುಡೆನ್ನವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.