ADVERTISEMENT

ಜನರ ಹಸಿವು ನೀಗಿಸುವ ರೈತರು

ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 19:30 IST
Last Updated 23 ಡಿಸೆಂಬರ್ 2019, 19:30 IST
ಬೆಳಗಾವಿಯಲ್ಲಿ ಸೋಮವಾರ ಭಾರತೀಯ ಕೃಷಿಕ ಸಮಾಜದಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ ಹಾಗೂ ಗಣ್ಯರು ಉದ್ಘಾಟಿಸಿದರು
ಬೆಳಗಾವಿಯಲ್ಲಿ ಸೋಮವಾರ ಭಾರತೀಯ ಕೃಷಿಕ ಸಮಾಜದಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ ಹಾಗೂ ಗಣ್ಯರು ಉದ್ಘಾಟಿಸಿದರು   

ಬೆಳಗಾವಿ: ‘ರೈತರು ದೇಶದ ಅನ್ನದಾತರಾಗಿದ್ದಾರೆ. ಚಳಿ, ಮಳೆ ಎನ್ನದೇ ದುಡಿದು ಜಗತ್ತಿಗೆ ಅನ್ನ ನೀಡುವ ಯೋಗಿಗಳಾಗಿದ್ದಾರೆ’ ಎಂದು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಸ್ಮರಿಸಿದರು.

ಇಲ್ಲಿನ‌ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಸೋಮವಾರ ಭಾರತೀಯ ಕೃಷಿಕ ಸಮಾಜ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ರಾಜ್ಯ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.

‘ರೈತರು ಶ್ರಮ ವಹಿಸಿದರೆ ಮಾತ್ರ ಜನರು ಮೂರು ಹೊತ್ತು ಊಟ ಮಾಡಲು ಸಾಧ್ಯ. ಹೀಗಾಗಿ, ಅವರ ಸ್ಮರಣೆಯಲ್ಲಿ ದಿನಾಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ರೈತರ ಸಂಕಷ್ಟಗಳನ್ನು ಸರ್ಕಾರದ ಮುಂದಿಟ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಿದೆ’ ಎಂದರು.

ADVERTISEMENT

‘ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ ಅವರು ಮಾಡಿರುವ ಸಾಮಾಜಿಕ ಮುಖಿ ಕಾರ್ಯಗಳನ್ನು ಗುರುತಿಸಿ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಆದರೆ, ಅವರು ಯಾವತ್ತೂ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದವರಲ್ಲ. ಪ್ರಶಸ್ತಿ ನಿರಾಕರಿಸಿದ್ದರು. ಪ್ರಶಸ್ತಿ ಸ್ವೀಕರಿಸಿದರೆ ರೈತ ಕುಲ ಸಂತಸಪಡುತ್ತದೆ ಎಂದು ಹೇಳಿದ ನಂತರವಷ್ಟೇ ಪಡೆದಿದ್ದಾರೆ’ ಎಂದು ತಿಳಿಸಿದರು.

ಭಾರತೀಯ ಕೃಷಿಕ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಗೌಡ ಮೋದಗಿ ಮಾತನಾಡಿ, ‘ಕೃಷಿಕ ಸಮಾಜದ 10ನೇ ದಿನಾಚರಣೆ ಕಾರ್ಯಕ್ರಮವಾಗಿದೆ. ದೇಶಕ್ಕೆ ದೊಡ್ಡ ಕೊಡುಗೆ ನೀಡಿದ ಮಾಜಿ ಪ್ರಧಾನಿ ಡಾ.ಚರಣಸಿಂಗ್ ಚೌಧರಿ ಅವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡದಿರುವುದು ವಿಷಾದನೀಯ. ಕೃಷಿಕರಾಗಿದ್ದ ಚರಣ್‌ ಸಿಂಗ್ ಅವರು ಹೋರಾಟದ ಮೂಲಕ ಶಾಸಕರಾಗಿ, ಸಂಸದರಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು’ ಎಂದು ಸ್ಮರಿಸಿದರು.

ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ರೈತ ದಿನಾಚರಣೆ ನಿಮಿತ್ತ ಅಂಚೆ ಇಲಾಖೆ ಹೊರತಂದಿರುವ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ಅಂಚೆ ಇಲಾಖೆಯಿಂದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಫಲಾನುಭವಿಗಳಿಗೆ ಉಳಿತಾಯ ಖಾತೆ ಪುಸ್ತಕಗಳನ್ನು ವಿತರಿಸಲಾಯಿತು.

ಕಳಸಾ-ಬಂಡೂರಿ‌ ಮಹದಾಯಿ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಪರಿಸರವಾದಿ ಶಿವಾಜಿ ಕಾಗಣೀಕರ, ಕೃಷಿಕ ಸಮಾಜದ ಗೌರವಾಧ್ಯಕ್ಷ ಜಯಪ್ಪ ಬಸರಕೋಡ, ಮುಖಂಡರಾದ ಸಿ. ನಾರಾಯಣಸ್ವಾಮಿ, ಈಶ್ವರ ಸಂಪಗಾವಿ, ಉಮೇಶ ಬಾಳಿ, ಪಾಂಡುರಂಗ ಪಾಟೀಲ, ಸಂತೋಷಕುಮಾರ ಮಿಶ್ರಾ, ಬಾಳಪ್ಪ‌ ಉದಗಟ್ಟಿ,ಅಂಚೆ ಕಚೇರಿಯ ಸೂಪರಿಂಟೆಂಡೆಂಟ್ ಎಸ್.ಡಿ. ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.