ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಪ್ರಜಾವಾಣಿ ಚಿತ್ರ
ಬೆಳಗಾವಿ: ‘ಪ್ರಾಣ ಬೇಕಾದರೂ ಚೆಲ್ಲುವೆ. ಮೀಸಲಾತಿ ಹೋರಾಟ ನಿಲ್ಲಿಸಲ್ಲ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದರು.
ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಇಡೀ ದಿನ ಧರಣಿ ನಡೆಸಿದ ಅವರು, ‘ಪಂಚಮಸಾಲಿ ವಿರೋಧಿ ಧೋರಣೆ ತಾಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತಪ್ಪು ತಿದ್ದಿಕೊಳ್ಳಬೇಕು. ಲಾಠಿ ಚಾರ್ಜ್ ಮಾಡಿಸಿದ್ದಕ್ಕೆ ಬಹಿರಂಗ ಕ್ಷಮೆ ಕೇಳಬೇಕು. ನ್ಯಾಯಸಮ್ಮತವಾಗಿ ಮೀಸಲಾತಿ ನೀಡಲೇಬೇಕು’ ಎಂದರು.
‘ಎಲ್ಲ ಪಕ್ಷಗಳ, ಎಲ್ಲ ಸರ್ಕಾರಗಳೂ ನಮಗೆ ಅನ್ಯಾಯ ಮಾಡಿವೆ. ಈಗಾಗಲೇ ನಮ್ಮ ಸಮಾಜದವರನ್ನು ಹೊಡೆಸಿ ರಕ್ತ ಚೆಲ್ಲಿದ್ದೀರಿ. ನನ್ನ ಪ್ರಾಣ ಚೆಲ್ಲಿದರೂ ಚಿಂತೆ ಇಲ್ಲ. ಮೀಸಲಾತಿ ಪಡೆದೇ ತೀರುವೆ’ ಎಂದರು.
‘ಸುವರ್ಣ ವಿಧಾನಸೌಧದ ಮುಂದೆ ಡಿಸೆಂಬರ್ 17ರಿಂದ ಮತ್ತೆ ಧರಣಿ ಮಾಡುತ್ತೇವೆ. ಅವಕಾಶ ಕೊಡದ್ದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ’ ಎಂದರು.
ಜಿಲ್ಲಾಧಿಕಾರಿ ಭರವಸೆ ಮೇರೆಗೆ ಸಂಜೆ 6ಕ್ಕೆ ಅವರು ಧರಣಿ ಕೈಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.