ಮೈಸೂರು/ಚಿಕ್ಕಮಗಳೂರು: ಮೈಸೂರು ಭಾಗದ ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಬುಧವಾರ ಜೋರು ಮಳೆಯಾಗಿದೆ. ಬಹುತೇಕ ಭಾಗಗಳಲ್ಲಿ ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಜಲಾಶಯಗಳು ಭರ್ತಿಯಾಗುತ್ತಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸುತ್ತಿರುವುದರಿಂದಾಗಿ ಪ್ರವಾಹದ ಆತಂಕ ಮನೆಮಾಡಿದೆ. ಕಾವೇರಿ, ಕಪಿಲಾ ನದಿದಂಡೆಯಲ್ಲಿರುವ ಜನರಿಗೆ ಕಾವೇರಿ ನೀರಾವರಿ ನಿಗಮವು ಮುನ್ನೆಚ್ಚರಿಕೆ ನೀಡಿದೆ.
ರಾಜ್ಯದ ಇತರ ಕೆಲವೆಡೆಯೂ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ, ಕೊಪ್ಪ, ಶೃಂಗೇರಿ, ಕುದುರೆಮುಖ, ಎನ್.ಆರ್.ಪುರ, ಮೂಡಿಗೆರೆ, ಕೊಟ್ಟಿಗೆಹಾರ, ಆಲ್ದೂರು, ಬಾಳೆಹೊನ್ನೂರು, ಚಿಕ್ಕಮಗಳೂರು, ಮುಳ್ಳಯ್ಯನಗಿರಿ ಸುತ್ತಮುತ್ತ ಮಳೆ ಜೋರಾಗಿತ್ತು.
ಶೃಂಗೇರಿ ಸಮೀಪದ ನೆಮ್ಮಾರ್ ಬಳಿ ಕಾರ್ಕಳ–ಶೃಂಗೇರಿ ರಸ್ತೆಗೆ ಮಣ್ಣು ಜರಿದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಯಿತು. ಮತ್ತೊಂದೆಡೆ ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಕವಿದು ವಾಹನ ಚಾಲನೆಗೆ ಸವಾರರು ಪರದಾಡಬೇಕಾಯಿತು.
ಕೊಡಗಿನ ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ, ಪೊನ್ನಂಪೇಟೆಯ ತಗ್ಗು ಪ್ರದೇಶಗಳು ಹಾಗೂ ಗುಡ್ಡದಲ್ಲಿ, ಕೆಳಗೆ ವಾಸಿಸುವವರಲ್ಲಿ ಆತಂಕ ಮೂಡಿದೆ.
ಎನ್ಡಿಆರ್ಎಫ್ ಸಹಾಯಕ ಕಮಾಂಡೆಂಟ್ ಕಿರಣ್ಕುಮಾರ್ ಅವರು ಭೂಕುಸಿತದ ಅಪಾಯವುಳ್ಳ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಗುರುವಾರ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿ, ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಗುರುವಾರ (ಜೂನ್ 26) ಬೆಳಿಗ್ಗೆಯವರೆಗೂ ಭಾರಿ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವುದರಿಂದ, ಅಂದು ಕೊಡಗು ಜಿಲ್ಲೆಯ (ಕುಶಾಲನಗರ ತಾಲ್ಲೂಕು ಹೊರತುಪಡಿಸಿ) ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಬೆಳಗಾವಿ, ಖಾನಾಪುರ ಹಾಗೂ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಜೂನ್ 26ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಹೆತ್ತೂರಿನಲ್ಲಿ 18 ಸೆಂ.ಮೀ, ಶಾಂತಳ್ಳಿಯಲ್ಲಿ 16 ಸೆಂ.ಮೀ, ಶ್ರೀಮಂಗಲದಲ್ಲಿ 14, ಶನಿವಾರಸಂತೆ ಹಾಗೂ ಹಾನಬಾಳು 11, ಯಸಳೂರಿನಲ್ಲಿ 10.9, ಹುದಿಕೇರಿ 9 ಸೆಂ.ಮೀ. ಮಳೆಯಾಗಿದೆ.
ಜಡಿಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆ ಬಳಿಯ ಕಪಿಲಾನದಿಯ ಪ್ರವಾಹ ಹೆಚ್ಚಿದ್ದು, ನದಿಯ ನೀರು ಶಿಶಿಲ ಗ್ರಾಮದಲ್ಲಿರುವ ಶಿಶಿಲೇಶ್ವರ ದೇವಾಲಯ ಗರ್ಭಗುಡಿಗೆ ನುಗ್ಗಿದೆ. ಪಕ್ಕದಲ್ಲಿರುವ ಅಂಗಡಿಗಳೂ ಜಲಾವೃತಗೊಂಡಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.
ಬೀದರ್ ವರದಿ: ಬೀದರ್ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಧ್ಯಾಹ್ನ ಅರ್ಧಗಂಟೆಗೂ ಹೆಚ್ಚು ಸಮಯ ಮಳೆ ಬಿದ್ದಿದೆ. ಬಿತ್ತನೆ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದ ರೈತರಲ್ಲಿ ಸ್ವಲ್ಪ ಸಮಾಧಾನ ತಂದಿದೆ. ಜಿಲ್ಲೆಯ ಹುಲಸೂರ ಹಾಗೂ ಔರಾದ್ ತಾಲ್ಲೂಕುಗಳಲ್ಲಿಯೂ ಮಳೆಯಾಗಿದೆ.
ಕಲಬುರಗಿ ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದೆ. ರಾಯಚೂರಿನಲ್ಲಿ ತುಂತುರು ಮಳೆಯಾಗಿದೆ.
ದೋಣಿ ವಿಹಾರ ಸ್ಥಗಿತ: ನಿಷೇಧಾಜ್ಞೆ ಜಾರಿ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯದಿಂದ 30ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದ್ದು ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಜಲಾಶಯದ ಪ್ಲಸ್ 80 ಅಡಿ ಮಟ್ಟದ ಗೇಟ್ಗಳ ಮೂಲಕ ಬುಧವಾರ ಮಧ್ಯಾಹ್ನದಿಂದ 30 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ನದಿ ತೀರದ ಅಪಾಯಕಾರಿ ಸ್ಥಳಗಳಲ್ಲಿ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿಗೆ ನಿಷೇಧಾಜ್ಞೆ ಜಾರಿಯಾಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಮಂಗಳವಾರ ಸಂಜೆಯಿಂದ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ. ಪ್ರವಾಸಿಗರಿಗೆ ಪಕ್ಷಿ ವೀಕ್ಷಣೆಗೆ ಮಾತ್ರ ಅವಕಾಶವಿದೆ.
16 ಸೇತುವೆಗಳು ಜಲಾವೃತ
ಬೆಳಗಾವಿ: ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಬುಧವಾರವೂ ಧಾರಾಕಾರ ಮಳೆ ಸುರಿದಿದೆ. ಇದರಿಂದ ಜಿಲ್ಲೆಯ 16 ಸೇತುವೆಗಳು ಜಲಾವೃತಗೊಂಡಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ ಕೃಷ್ಣಾ ನದಿಗೆ 73042 ಕ್ಯೂಸೆಕ್ ಹೊರ ಹರಿವು ಇದ್ದು ಕಲ್ಲೋಳ ಬಳಿಯಲ್ಲಿ ದೂಧಗಂಗಾ ನದಿಯಲ್ಲಿ 19008 ಕ್ಯೂಸೆಕ್ ಕೃಷ್ಣಾ ನದಿಯಲ್ಲಿ 92050 ಕ್ಯೂಸೆಕ್ ನೀರು ಹರಿಯುತ್ತಿದೆ.
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರ ಮಲಿಕವಾಡ– ದತ್ತವಾಡ ಸೇತುವೆಗಳು ನಿಪ್ಪಾಣಿ ತಾಲ್ಲೂಕಿನ ಕಾರದಗಾ– ಭೋಜ ಭೋಜವಾಡಿ– ಕುನ್ನೂರ ಸಿದ್ನಾಳ– ಅಕ್ಕೋಳ ಜತ್ರಾಟ– ಭಿವಶಿ ಹುನ್ನರಗಿ– ಮಮದಾಪೂರ ಕುನ್ನೂರ– ಬಾರವಾಡ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ.
ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ಜಲಾನಯನ ಪ್ರದೇಶದಲ್ಲಿ ಬಿದ್ದ ಮಳೆಯಿಂದಾಗಿ ಯರನಾಳ ಸೇತುವೆ ಸಂಕೇಶ್ವರ ಸೇತುವೆ ಹಾಗೂ ಘಟಪ್ರಭಾ ನದಿಗೆ ನಿರ್ಮಿಸಿದ ದಡ್ಡಿ ಶೆಟ್ಟಿಹಳ್ಳಿ– ಸಲಾಮವಾಡಿ ಸೇತುವೆಗಳು ಮುಳುಗಡೆಯಾಗಿವೆ. ಘಟಪ್ರಭಾ ನದಿ ಮೈದುಂಬಿ ಹರಿಯುತ್ತಿದ್ದು ಮೂಡಲಗಿ ತಾಲ್ಲೂಕಿನ ಅವರಾದಿ ಸೇತುವೆ ಮುಳುಗಡೆಯಾಗಿದೆ. ಇದರಿಂದ ಮೂಡಲಗಿ– ಸುಣಧೋಳಿ ಸಂಪರ್ಕ ಕಡಿತಗೊಂಡಿದೆ.
ಖಾನಾಪುರ ತಾಲ್ಲೂಕಿನ ಭೀಮಗಡ ಅರಣ್ಯ ಪ್ರದೇಶದಲ್ಲೂ ಧಾರಾಕಾರ ಮಳೆ ಮುಂದುವರಿದಿದೆ. ಸಿಂಧನೂರು– ಹೆಮ್ಮಡಗಾ ಮಾರ್ಗದ ಅಲಾತ್ರಿ ಹಳ್ಳದ ಸೇತುವೆ ದೇವಾಚಿಹಟ್ಟಿ– ಜಾಂಬೋಟಿ ಮಾರ್ಗಗಳ ಎರಡು ಸೇತುವೆಗಳ ಮೇಲೆ ಹಲವು ಅಡಿಗಳಷ್ಟು ನೀರು ಹರಿಯುತ್ತಿದ್ದು ಈ ಮೂರೂ ಸೇತುವೆಗಳಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.