ADVERTISEMENT

ಬೆಳಗಾವಿಯಲ್ಲಿ ಬೆನಕನ ‘ಬೆಳಕು’: ಮೂರ್ತಿಗಳ ಅಂದ ನೋಡಲು ತಂಡೋಪತಂಡವಾಗಿ ಬಂದ ಜನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 3:06 IST
Last Updated 1 ಸೆಪ್ಟೆಂಬರ್ 2025, 3:06 IST
ಬೆಳಗಾವಿಯ ಖಡಕ್‌ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ಗಣಪನ ಮೂರ್ತಿ ನೋಡಲು ಕಿಕ್ಕಿರಿದು ಸೇರಿದ ಜನ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಖಡಕ್‌ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ಗಣಪನ ಮೂರ್ತಿ ನೋಡಲು ಕಿಕ್ಕಿರಿದು ಸೇರಿದ ಜನ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಈ ಬಾರಿಯ ಗಣೇಶ ಚತುರ್ಥಿ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ನಗರದೆಲ್ಲೆಡೆ ಈಗ ಝಗಮಗಿಸುವ ಇದ್ಯುದ್ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ. ಮಾರುಕಟ್ಟೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಇಂಚಿಂಚಿಗೂ ರಂಗುರಂಗಿನ ದೀಪಾಲಂಕಾರ ಜನರನ್ನು ಸೆಳೆಯುತ್ತಿದೆ. ಪ್ರತಿ ವರ್ಷದ ವಾಡಿಕೆಯಿಂದ ಐದನೇ ದಿನದ ನಂತರ ಈ ದೀಪಾಲಂಕಾರ ನೋಡಲು ಜನ ತಂಡೋಪತಂಡವಾಗಿ ಧಾವಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿ ಕೂಡ ಮೂರು ಅಡಿಯಿಂದ ಹಿಡಿದು ಸುಮಾರು 15 ಅಡಿಗಳಷ್ಟು ಎತ್ತರದ ಮೂರ್ತಿಗಳನ್ನು ಮಂಡಳಗಳು ಪ್ರತಿಷ್ಠಾಪನೆ ಮಾಡಿವೆ. ಅದರೊಂದಿಗೆ ವರ್ತಮಾನದ ಸಂದೇಶಗಳನ್ನು ಬಿಂಬಿಸುವ ಕಲಾಕೃತಿಗಳನ್ನು ಮಾಡಲಾಗಿದೆ. ಕೆಲವೆಡೆ ಆಪರೇಷನ್‌ ಸಿಂಧೂರದಂಥ ಮಾದರಿಗಳನ್ನು ಮಾಡಿದ್ದು ಕಣ್ಮನ ಸೆಳೆಯುತ್ತಿದೆ. 

ಭಾನುವಾರದಿಂದ ಗಣಪತಿ ನೋಡಲು ಬರುವ ಜನಜಂಗುಳಿ ಹೆಚ್ಚಾಗಿದೆ. ಮಾರುಕಟ್ಟೆ ಪ್ರದೇಶದಲ್ಲಂತೂ ಬೈಕ್‌, ಸೈಕಲ್‌ಗಳೂ ದಾಟದಂತೆ ಜನ ಕಿಕ್ಕಿರಿದು ಸೇರಿದ್ದಾರೆ. ರಾಣಿ ಚನ್ನಮ್ಮ ವೃತ್ತದಿಂದ ಮೂರ್ತಿಗಳನ್ನು ನೋಡಲು ಆರಂಭಿಸಿದರೆ ಶನಿವಾರ ಕೂಟ, ಕಾಕತಿವೇಸ್, ಗಣತಿ ಗಲ್ಲಿ, ಮಾರುತಿ ಗಲ್ಲಿ, ಪಾಂಗುಳಗಲ್ಲಿ, ರಿಸಾಲ್ದಾರ ಗಲ್ಲಿ, ಖಡಕ್‌ ಗಲ್ಲಿ, ಶಹಾಪುರ ರಸ್ತೆ, ವಡಗಾವಿ, ಅನಗೋಳ ಸೇರಿದಂತೆ ಎಲ್ಲ ಪ್ರದೇಶಗಳ ಗಲ್ಲಿಗಲ್ಲಿ, ಸಂದಿಗೊಂದಿಗಳಲ್ಲೂ ಅಂದದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ADVERTISEMENT
ಬೆಳಗಾವಿಯ ಚವಾಟ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ಗಣಪನ ಮುಂದೆ ಮರಾಠ ಮಂಡಳ ಕಾಲೇಜಿನ 1300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲಕ್ಕೆ ಗಣೇಶ ಸ್ಥಿತಿಗೆ ಧ್ವನಿಗೂಡಿಸಿದರು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ನಗರದ ಅರ್ಧಕ್ಕೂ ಹೆಚ್ಚು ಪ್ರದೇಶ ಈಗ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಸಾಲು ಸಾಲು ಬಲ್ಬುಗಳನ್ನು ಒಪ್ಪ ಓರಣವಾಗಿ ಜೋಡಿಸಿರುವ ಮಂಡಳಗಳ ಸದಸ್ಯರು, ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ದೀಪಗಳ ಸಾಲಿನಲ್ಲಿ ಓಡಾಡುವುದು, ಫೋಟೊ, ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸುವುದೇ ಎಲ್ಲೆಲ್ಲೂ ಕಾಣುತ್ತಿದೆ.

ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಮಂಡಳದವರು ಪೊಲೀಸ್‌ ಇಲಾಖೆಯೊಂದಿಗೆ ಸೇರಿ ಸುರಕ್ಷತಾ ಕ್ರಮಕ್ಕೆ ಮುಂದಾಗಿದ್ದಾರೆ. ಬ್ಯಾರಿಕೇಡ್‌ಗಳನ್ನು ಇಟ್ಟು ಜನರು ಸಾಲಾಗಿ ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. ಬಹುಪಾಲು ಎಲ್ಲ ಕಡೆ ಇ– ಹುಂಡಿಗಳು ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಬೆಳಗಾವಿಯ ನಾಥ್‌ ಪೈ ವೃತ್ತದಲ್ಲಿ ಪ್ರತಿಷ್ಠಾಪಿಸಿದ ವಿನಾಯಕನ ಮೂರ್ತಿ ಮುಂದೆ ಗೊಂಬೆಗಳ ಆಟ ಕಣ್ಮನ ಸೆಳೆಯುವಂತಿದೆ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಮತ್ತೆ ಕೆಲವು ಮಂಡಳಗಳು ಬೃಹತ್ ಶಾಮಿಯಾನ ಹಾಕಿ ಗೊಂಬೆಗಳ ಆಟ ಏರ್ಪಡಿಸಿದ್ದಾರೆ. ನೃತ್ಯ, ಸಂಗೀತ ಹಾಗೂ ರಂಗೋಲಿ ಸ್ಪರ್ಧೆಗಳೂ ನಿರಂತರ ನಡೆದಿವೆ. 

ಮೇಲಿಂದ ಮೇಲೆ ಮಳೆ ಸುರಿಯುತ್ತಿದ್ದರೂ ಗಣಪತಿ ಸಂಭ್ರಮ ಮಾತ್ರ ಕುಂದಿಲ್ಲ. ಕೊಡೆಗಳನ್ನು ಹಿಡಿದು, ಜರ್ಕಿನ್‌ಗಳನ್ನ ಧರಿಸಿಯೇ ಯುವಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಹಳ್ಳಿಗಳಿಂದ ಕೂಡ ಜನ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಬಂದು ವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ.

ಐದಿ ದಿನಗಳ ಮೂರ್ತಿ ವಿಸರ್ಜನೆ
ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಕಡೆ ಮನೆ–ಮನೆಗಳಲ್ಲಿ ವಿಘ್ನ ನಿವಾರಕನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆಗಸ್ಟ್‌ 27ರಂದು ಪ್ರತಿಷ್ಠಾಪನೆ ಮಾಡಿದ ಮೂರ್ತಿಗಳನ್ನು ಐದು ದಿನಗಳ ಬಳಿಕ ಅಂದರೆ; ಆ.31ರಂದು ವಿಸರ್ಜನೆ ಮಾಡಲಾಯಿತು. ಮನೆಯ ಸದಸ್ಯರೆಲ್ಲ ವಾದ್ಯಮೇಳಗಳ ಸಮೇತ ಹೊಂಡಗಳ ಬಳಿ ಬಂದು ಮೂರ್ತಿ ವಿಸರ್ಜನೆ ಮಾಡಿದರು. ಹಳ್ಳಿಗಳ ಜನ ಕೆರೆ ಬಾವಿಗಳಲ್ಲಿ ಹಾಕಿದರು. ಮತ್ತೆ ಕೆಲವು ಕಡೆ ತಾತ್ಕಾಲಿಕ ಹೊಂಡಗಳನ್ನು ಮಾಡಿದ್ದು ಅದರಲ್ಲಿಯೇ ವಿಸರ್ಜನೆ ಮಾಡಲು ಅನುಕೂಲ ಮಾಡಿ ಕೊಡಲಾಯಿತು. ಎಲ್ಲೆಡೆ ಪಟಾಕಿಗಳ ಸದ್ದು ನಿರಂತರವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.