ADVERTISEMENT

ಧಾರವಾಡದಿಂದ ಬೆಳಗಾವಿಗೆ ಬಂತು ಹೃದಯ: ಯುವಕನಿಗೆ ಶಸ್ತ್ರಚಿಕಿತ್ಸೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 16:29 IST
Last Updated 11 ಜುಲೈ 2022, 16:29 IST
ಧಾರವಾಡದಿಂದ ಬಾಲಕಿಯ ಹೃದಯವನ್ನು ಬೆಳಗಾವಿಯ ಕೆಎಲ್‌ಇಎಸ್‌ ಆಸ್ಪತ್ರೆಗೆ ಸುರಕ್ಷಿತವಾಗಿ ತಂದ ಪರಿಣತರ ತಂಡ
ಧಾರವಾಡದಿಂದ ಬಾಲಕಿಯ ಹೃದಯವನ್ನು ಬೆಳಗಾವಿಯ ಕೆಎಲ್‌ಇಎಸ್‌ ಆಸ್ಪತ್ರೆಗೆ ಸುರಕ್ಷಿತವಾಗಿ ತಂದ ಪರಿಣತರ ತಂಡ   

ಬೆಳಗಾವಿ: ಮಿದುಳು ನಿಷ್ಕ್ರಿಯವಾದ 15 ವರ್ಷದ ಬಾಲಕಿಯ ಹೃದಯವನ್ನು ಧಾರವಾಡದಿಂದ ಬೆಳಗಾವಿಯ ಕೆಎಲ್ಇಎಸ್‌ ಆಸ್ಪತ್ರೆಗೆ ಸುರಕ್ಷಿತವಾಗಿ ತರಲಾಯಿತು. ಹೃದಯ ಕಸಿ ಮಾಡಲು ಸನ್ನದ್ಧವಾಗಿ ನಿಂತಿದ್ದ ಇಲ್ಲಿನ ವೈದ್ಯರ ತಂಡ ತಕ್ಷಣಕ್ಕೆ ಕೆಲಸ ಆರಂಭಿಸಿತು.

ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ.ರಿಚರ್ಡ್‌ ಸಾಲ್ಡಾನಾ, ಡಾ.ಮೋಹನ ಗಾನ, ಡಾ.ಆನಂದ ವಾಘರಾಳಿ ಮತ್ತು ಅವರ ತಂಡವು ನಿರತವಾಗಿದೆ. ಸತತ ಆರು ತಾಸುಗಳವರೆಗೆ ಈ ಕಸಿ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪೊಲೀಸ್‌ ಇಲಾಖೆಯ ನೆರವಿನೊಂದಿಗೆ ಝೀರೊ ಟ್ರಾಫಿಕ್‌ನಲ್ಲಿ (ಗ್ರೀನ್‌ ಕಾರಿಡಾರ್‌) ಬಾಲಕಿಯ ಹೃದಯನ್ನು ತರಲಾಯಿತು. ಎರಡು ಪೊಲೀಸ್‌ ಬೆಂಗಾವಲು ವಾಹನಗಳು ಆಂಬುಲೆನ್ಸ್‌ ಮುಂದೆ– ಹಿಂದೆ ಸಂಚರಿಸಿದವು. 90 ಕಿ.ಮೀ ದೂರವನ್ನು ವಿಶೇಷ ಆಂಬಿಲೆನ್ಸ್‌ ಮೂಲಕ ಕೇವಲ ಒಂದು ತಾಸಿನಲ್ಲಿ ಕ್ರಮಿಸಲಾಯಿತು.

ADVERTISEMENT

ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಬಾಲಕಿಯ ಮಿದುಳು ಸೋಮವಾರ ನಿಷ್ಕ್ರಿಯಗೊಂಡಿತು. ಹೃದಯ ಇನ್ನೂ ಬಡಿದುಕೊಳ್ಳುತ್ತಿತ್ತು. ಇದೇ ಕಾಲಕ್ಕೆ ಹೃದ್ರೋಗದಿಂದ ಬಳಲುತ್ತಿರುವ ಯುವಕ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದರು. ವಿಷಯ ತಿಳಿದ ಯುವತಿಯ ಪಾಲಕರು ಆಕೆಯ ಅಂಗಾಂಗ ದಾನ ಮಾಡಲು ಸಮ್ಮತಿಸಿದರು. ಅದರಂತೆ, ಪರಿಣತರ ತಂಡವು ಹೃದಯವನ್ನು ಜೋಪಾನವಾಗಿ ಆಸ್ಪತ್ರೆ ತಲುಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.