
ಗೋಕಾಕ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪ್ರಾಮಾಣಿಕ ಪ್ರಯತ್ನದಿಂದ ಲೋಳಸೂರ ಹೊಸ ಸೇತುವೆ ನಿರ್ಮಾಣಕ್ಕೆ ₹30.21 ಕೋಟಿ ಅನುದಾನವು ಬಿಡುಗಡೆಯಾಗಿದ್ದು, ಒಂದೂವರೆ ವರ್ಷದೊಳಗೆ ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದು ಬೆಮುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಲೋಳಸೂರ ಗ್ರಾಮದಲ್ಲಿ ಜತ್ತ- ಜಾಂಬೋಟಿ ರಾಜ್ಯ ಹೆದ್ದಾರಿ 31ರ ಕಿ.ಮೀ. 101.30 ರ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ₹30.21 ಕೋಟಿ ವೆಚ್ಚದ ಲೋಳಸೂರ ಸೇತುವೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸೇತುವೆ ನಿರ್ಮಾಣಕ್ಕೆ ಅನುದಾನವನ್ನು ತಂದಿರುವ ಸಚಿವ ಸತೀಶ ಜಾರಕಿಹೊಳಿ ಅವರನ್ನು ಅಭಿನಂದಿಸಿದರು.
ನೂತನ ಸೇತುವೆ ನಿರ್ಮಾಣದಿಂದ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಮಳೆಗಾಲ, ಪ್ರವಾಹದಂತಹ ಸಂದರ್ಭಗಳಲ್ಲಿಯೂ ಸಹ ಅದನ್ನು ಎದುರಿಸಲಿಕ್ಕೆ ಇನ್ನು ಮುಂದೆ ಸರಳವಾಗಲಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಕಿರಿದಾದ ಸೇತುವೆ ಮತ್ತು 1964ರಲ್ಲಿ ನಿರ್ಮಾಣಗೊಂಡ ಪಕ್ಕದ ದೊಡ್ಡದಾದ ಸೇತುವೆಯ ಮಧ್ಯ ಹೊಸ ಸೇತುವೆಯು ತಲೆ ಎತ್ತಲಿದೆ. ಎರಡೂ ಸೇತುವೆಗಳಿಗೆ ಯಾವುದೇ ಹಾನಿಯಾಗದಂತೆ ಕಾಮಗಾರಿಯನ್ನು ಕೈಕೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬ್ರಿಟಿಷರ ಅವಧಿಯಲ್ಲಿ ನಿರ್ಮಾಣವಾಗಿರುವ ಸಣ್ಣ ಸೇತುವೆಯು ಚಕ್ಕಡಿ ಮೂಲಕ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಸಂಚರಿಸುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಅದರಂತೆ ನಾವು ಹುಟ್ಟುವ ಮುನ್ನ ನಿರ್ಮಾಣವಾಗಿರುವ ಮುಖ್ಯ ಸೇತುವೆಗೆ ಯಾವುದೇ ಹಾನಿಯಾಗದಂತೆ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಳಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ ಗಡಾದ ವಹಿಸಿದ್ದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ, ರಾಷ್ಟ್ರೀಯ ಹೆದ್ದಾರಿ ಉತ್ತರ ವಲಯ ಬೆಳಗಾವಿ ಮುಖ್ಯ ಅಭಿಯಂತರ ಮನ್ಮಥಯ್ಯಸ್ವಾಮಿ, ರಾಷ್ಟ್ರೀಯ ಹೆದ್ದಾರಿ ವಿಜಯಪುರ ಉಪ ವಿಭಾಗದ ಎಇಇ ವಿವೇಕ ಮಠ, ಪ್ರಭಾ ಶುಗರ್ಸ್ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಸಂಜಯ ನಿಂಬಾಳಕರ, ಗೋಕಾಕ ಪಿಡಬ್ಲ್ಯೂಡಿ ಎಇಇ ಅವತಾಡೆ, ಲೋಳಸೂರ ಗ್ರಾ. ಪಂ ಉಪಾಧ್ಯಕ್ಷೆ ನಾಗವ್ವ ಗಸ್ತಿ, ವಕೀಲ ಲಕ್ಷ್ಮಣ ತಪಶಿ, ಗೋಕಾಕ ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಮುರಾರಿ, ಜಯಾನಂದ ಹುಣಚ್ಯಾಳ, ಪ್ರಮುಖರಾದ ಮನೋಹರ ಗಡಾದ, ಯಮನಪ್ಪ ಬಾಗಾಯಿ, ಪುಂಡಲೀಕ ಮೇಟಿ, ಶಮ್ಮು ಮುಲ್ಲಾ, ರಶೀದಹ್ಮದ ಪೀರಜಾದೆ, ಲಕ್ಷ್ಮಣ ಕುರಿ, ಅರೀಫ ಪೀರಜಾದೆ, ಲಕ್ಷ್ಮಣ ಗುಂಡ್ಯಾಗೋಳ, ಉದ್ದಪ್ಪ ಸುಣಗಾರ, ನಜೀರ ಮಕಾನದಾರ, ಶ್ರೀಶೈಲ ಕಂಬಿ, ಕಲ್ಲಿನಾಥ ಪೂಜೇರಿ, ಮಾಯಪ್ಪ, ಮನಸೂರ ಪಿಂಜಾರ, ಮಹಾದೇವ ಹಾವಗಾರ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.