
ಮೂಡಲಗಿ: ‘ಪ್ರತಿ ಭಾರತೀಯರಲ್ಲಿ ಹಿಂದೂತ್ವವನ್ನು ಜಾಗೃತಿಗೊಳಿಸಿ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸುವುದು ಹಿಂದೂ ಸಮಾವೇಶದ ಮುಖ್ಯ ಉದ್ಧೇಶವಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಜಯ ನಾಯಕ ಹೇಳಿದರು.
ಇಲ್ಲಿಯ ಬಸವ ರಂಗಮಂಟಪದ ಬಳಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಆಯೋಜಿಸಿದ್ದ ಬೃಹತ್ ಹಿಂದೂ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ‘ಯಾರನ್ನೋ ತೆಗಳುವುದಾಗಲಿ, ರಾಜಕೀಯ ಪಕ್ಷಕ್ಕಾಗಲಿ, ಜಾತಿ, ಮತ, ಪಂಥಕ್ಕೆ ಸಂಘಟನೆಯು ಸೀಮಿತವಾಗಿರುವುದಿಲ್ಲ. ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿಯನ್ನು ಜಾಗೃತಿಗೊಳಿಸಿ ಹಿಂದೂ ಪರಂಪರೆಯ ವೈಭವವನ್ನು ಸಂರಕ್ಷಿಸುವುದಾಗಿದೆ’ ಎಂದರು.
ಆರ್ಎಸ್ಎಸ್ನ ಕುಟುಂಬ ಭೌತಿಕ ಪ್ರಮುಖ ಸಂಜಯ್ ನಾಯಕ, ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಕಿರಣರಾಮ ಮಾತನಾಡಿದರು.
‘ಭಾರತಕ್ಕೆ ಪ್ರಾಚೀನ ಇತಿಹಾವಿದೆ. ಪರಕೀಯರ ಮೋಸದ ದಾಳಿಗೆ ಸಿಲುಕಿಕೊಂಡು, ಕಷ್ಟಗಳನ್ನು ಎದುರಿಸಿದ್ದರೂ ಸಹ ಹಿಂದೂತ್ವಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ಉಳಿಸಿಕೊಂಡು ಬಂದಿದೆ. ಭಾರತವು ಯಾರ ವಕ್ರದೃಷ್ಟಿಗೆ ಬೀಳದಂತೆ ಹಿಂದೂ ಸಂಸ್ಕೃತಿ, ಪರಪಂರೆಯ ನಲೆಯಲ್ಲಿ ಗಟ್ಟಿಗೊಳಿಸುವುದಕ್ಕೆ ಜಾಗೃತಿಯಾಗಬೇಕಾಗಿದೆ ಎಂದರು.
ಶ್ರೀಧರಬೋಧ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ದತ್ತಾತ್ರೇಯ ಬೋಧ ಸ್ವಾಮೀಜಿ ಪ್ರತಿಜ್ಞಾವಿಧಿ ಬೋಧಿಸಿದರು. ಏಷಿಯಿನ್ ಪ್ಯಾರಾ ಟೇಂಕ್ವಾಡೋದಲ್ಲಿ ಕಂಚಿನ ಪದಕ ಪಡೆದ ಲಕ್ಷ್ಮೀ ರಡರಟ್ಟಿ ಹಾಗೂ ಶಿಕ್ಷಣ ಇಲಾಖೆಯ ರಾಷ್ಟ್ರ ಮಟ್ಟದ ಹಾಕಿ ಟೂರ್ನಿಗೆ ಆಯ್ಕೆಯಾಗಿರುವ ಲಕ್ಷ್ಮಿ ಸಂಜು ಢವಳೇಶ್ವರ ಅವರನ್ನು ಸನ್ಮಾನಿಸಿದರು.
ಸುಣಧೋಳಿಯ ಶಿವಾನಂದ ಸ್ವಾಮೀಜಿ, ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಶಿವಾಪೂರ (ಹ)ದ ಅಡವಿಸಿದ್ಧರಾಮ ಸ್ವಾಮೀಜಿ, ಜೋಕಾನಟ್ಟಿಯ ಬಿಳಿಯಾನಸಿದ್ದ ಸ್ವಾಮೀಜಿ, ಮುನ್ಯಾಳದ ಲಕ್ಷ್ಮಣ ದೇವರು ಭಾಗವಹಿಸಿದ್ದರು. ಈರಣ್ಣ ಕೊಣ್ಣೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಧರ್ಮಟ್ಟಿ ನಿರೂಪಿಸಿದರು.
ಶೋಭಾಯಾತ್ರೆ: ಸಮಾರಂಭದ ಪೂರ್ವದಲ್ಲಿ ಶಿವಬೋಧರಂಗ ಮಠದಿಂದ ಶೋಭಾಯಾತ್ರೆ ಪ್ರಾರಂಭಗೊಂಡಿತು. ವಿವಿಧ ಸಂಪ್ರದಾಯ ವಾದ್ಯಗಳ ವಾದನ, ದಾರಿಯುದ್ದಕ್ಕೂ ರಂಗೋಲಿಗಳ ಚಿತ್ತಾರ, ಎಲ್ಲ ಕಡೆಯಲ್ಲಿ ಭಗವಾಧ್ವಜ ಹಾರಾಟವು ಗಮನ ಸೆಳೆಯಿತು. ಶೋಭಾಯಾತ್ರೆಯು ಬಸವ ರಂಗಮಂಟಪ ಬಳಿಯಲ್ಲಿ ಸಮಾವೇಶಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.