ADVERTISEMENT

ನಾನು ನವ್ಯಶ್ರೀಯ ಗಂಡನಲ್ಲ, ಮದುವೆ ಆಗುವುದಾಗಿಯೂ ಹೇಳಿಲ್ಲ: ರಾಜಕುಮಾರ ಟಾಕಳೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 6:12 IST
Last Updated 20 ಜುಲೈ 2022, 6:12 IST
ಬೆಳಗಾವಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರು ನವ್ಯಶ್ರೀ ಅವರಿಗೆ ಕೇಕ್ ತಿನ್ನಿಸುತ್ತಿರುವ ಚಿತ್ರ
ಬೆಳಗಾವಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರು ನವ್ಯಶ್ರೀ ಅವರಿಗೆ ಕೇಕ್ ತಿನ್ನಿಸುತ್ತಿರುವ ಚಿತ್ರ   

ಬೆಳಗಾವಿ: 'ಚನ್ನಪಟ್ಟಣದ ನವ್ಯಶ್ರೀ ಅವರು ಈ ಹಿಂದೆಯೂ ನನ್ನ ಕಡೆಯಿಂದ ಡಿ.ಡಿ ರೂಪದಲ್ಲಿ ₹2 ಲಕ್ಷ ಹಾಗೂ ₹ 3 ಲಕ್ಷ ನಗದು ಪಡೆದಿದ್ದಾರೆ. ಈಗ ಮತ್ತೆ ಪೀಡಿಸುತ್ತಿರುವ ಕಾರಣ ದೂರು ನೀಡಿದ್ದೇನೆ. ನಾನು ಅವರನ್ನು ಮದುವೆಯಾಗಿಲ್ಲ' ಎಂದು ತೋಟಗಾರಿಕೆ ಇಲಾಖೆಯ ಖಾನಾಪುರ ಸಸ್ಯ ಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಪ್ರತಿಕ್ರಿಯಿಸಿದರು.

‘ನವ್ಯಶ್ರೀ ವಿಡಿಯೊ, ಆಡಿಯೊ ವೈರಲ್ ಮಾಡಿದ್ದಾರೆ. ಅದರಲ್ಲಿ ಎಲ್ಲಿಯೂ ನಾನು ಪತ್ನಿ ಎಂದು ಹೇಳಿಕೊಂಡಿಲ್ಲ. ಅವರ ಮನೆಯ ವಿಚಾರವಾಗಿ ಕುಟುಂಬದವರಲ್ಲಿ ಜಗಳ ನಡೆದಿತ್ತು. ಹಾಗಾಗಿ ನಾನು ಆಶ್ರಯ ನೀಡಿದ್ದೆ. ನಮ್ಮ ಸಮಾಜದವರು ಎಂಬ ಕಾರಣಕ್ಕೆ ಸಹಾಯ ಮಾಡಿದ್ದೇನೆ. ಅದನ್ನೇ ದುರುಪಯೋಗ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ’ಎಂದು ಅವರು ನಗರದಲ್ಲಿ ಬುಧವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

‘ಕಳೆದ ನಾಲ್ಕು ದಿನಗಳಿಂದ ಮಾನಸಿಕವಾಗಿ ಬಹಳ ತೊಂದರೆ ನೀಡಿದ್ದಾರೆ. ನನ್ನ ಪತ್ನಿಯ ಸಹಕಾರದಿಂದಲೇ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಪೊಲೀಸರಿಂದ ನನಗೆ ನ್ಯಾಯ ಸಿಗುವ ಭರವಸೆ ಇದೆ. ನಾನೊಬ್ಬ ಸರ್ಕಾರಿ ನೌಕರನಾಗಿದ್ದು ಹೆಚ್ಚಿಗೆ ಮಾತನಾಡಲಾರೆ’ಎಂದರು.

ADVERTISEMENT

'ಕಳೆದ ಐದಾರು ತಿಂಗಳಿಂದ ಬ್ಲ್ಯಾಕ್ ಮೇಲ್ ನಡೆಯುತ್ತಿದೆ. ಹಿಂದೆ ನಾನೇ ಪತಿ ಎಂದು ನವ್ಯಶ್ರೀ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ನಂತರ ಹಣ ಕೊಡಲು ಒಪ್ಪಿದ್ದರಿಂದ, ಇವರು ನನ್ನ ಪತಿ ಅಲ್ಲ, ನಾನು ಕೊಟ್ಟ ದೂರು ಸುಳ್ಳು ಇದೆ. ನಮ್ಮಿಬ್ಬರ ಮಧ್ಯೆ ಕೇವಲ ಹಣಕಾಸಿನ ವ್ಯವಹಾರ ಇದೆ ಎಂಬುದಾಗಿ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟು ದೂರು ಹಿಂಪಡೆದಿದ್ದರು' ಎಂದೂ ತಿಳಿಸಿದರು.

‘ಈಗ ₹ 50 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.₹ 2 ಲಕ್ಷ ಪಡೆದುಕೊಂಡಿದ್ದಾರೆ. ನನ್ನ ಮದುವೆಯಾಗಿದೆ ಎಂದು ತಿಳಿದ ನಂತರ ಪೀಡಿಸಲು ಶುರು ಮಾಡಿದ್ದಾರೆ. ಈಗ ನಾನೇ ಗಂಡ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಿಂದೂ ವಿವಾಹ ಪದ್ಧತಿ ಪ್ರಕಾರ ಎರಡನೇ ಮದುವೆಯಾಗಲು ಬರುವುದಿಲ್ಲ. ಹಾಗಾಗಿ ಮದುವೆ ಮಾಡಿಕೊಳ್ಳಲು ಸಾಧ್ಯವೂ ಇಲ್ಲ’ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಅವರು ಏನೇ ದಾಖಲೆ ಬಿಡುಗಡೆ ಮಾಡಿದರೂ ತೊಂದರೆ ಇಲ್ಲ. ನನ್ನ ಬಳಿ ಎಲ್ಲದಕ್ಕೂ ಉತ್ತರವಿದೆ. ಜನರಿಗೆ ಈ ವಿಚಾರ ತಿಳಿಯಬೇಕು ಎಂದು ಮಾಧ್ಯಮಗಳ ಮುಂದೆ ಬಂದಿದ್ದೇನೆ. ವಿಡಿಯೊ, ಆಡಿಯೊ ಬಗ್ಗೆ ತನಿಖೆ ಆಗಲಿ, ಸತ್ಯಾಸತ್ಯತೆ ಹೊರ ಬರಲಿ’ಎಂದರು.

‘ತಿಲಕಕುಮಾರ್ ತಮ್ಮ ಮಾವ ಎಂದು ನವ್ಯಶ್ರೀ ಹೇಳಿದ್ದರು. ಆಮೇಲೆ ಆತ ಆಕೆಯ ಗೆಳೆಯ ಎಂದು ಗೊತ್ತಾಗಿದೆ. ಯಾರಿಗೂ ಈ ರೀತಿಯ ಬ್ಲ್ಯಾಕ್ ಮೇಲ್ ಆಗಬಾರದು. ಸೌಮ್ಯವಾದ ಮನುಷ್ಯನಿಗೆ ಅನ್ಯಾಯವಾದರೆ ಅವನೂ ರಾಕ್ಷಸ ಆಗುತ್ತಾನೆ’ಎಂದೂ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.