ADVERTISEMENT

ಬಿಜೆಪಿ ಸೇರಲಿಲ್ಲವೆಂದು ನನ್ನನ್ನು ಜೈಲಿಗೆ ಹಾಕಿಸಿದ್ದರು: ಡಿಕೆ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 6:14 IST
Last Updated 6 ಡಿಸೆಂಬರ್ 2021, 6:14 IST
 ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಳಗಾವಿ: 'ನಾನು ಬಿಜೆಪಿ ಸೇರಲಿಲ್ಲವೆಂಬ ಕಾರಣಕ್ಕೆ ಕಾರಾಗೃಹಕ್ಕೆ ಕಳುಹಿಸಿದರು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, 'ಬಿಜೆಪಿಯವರಿಗೆ ಬೆಂಬಲ ಕೊಡಲಿಲ್ಲ ಹಾಗೂ ಅವರೊಂದಿಗೆ ಹೋಗಲಿಲ್ಲ ಎಂದು ಕಾರಾಗೃಹಕ್ಕೆ ಹಾಕಿಸಿದರು.‌ ಇದು ಎಲ್ಲರಿಗೂ ಗೊತ್ತಿದೆಯಲ್ಲಾ; ದಾಖಲೆಗಳು ಇದೆಯಲ್ಲಾ' ಎಂದು ಕೇಳಿದರು.

'ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇವೆ' ಎಂಬ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಎಂಬ ಹೇಳಿಕೆಗೆ,'ಪಾಪ ಅವರಿಗಾದ ನೋವಿನಿಂದ ಆ ರೀತಿ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಮೇಲೆ ಹೇಳಕ್ಕಾಗಲ್ಲವಲ್ಲ? ದುಃಖ, ದುಮ್ಮಾನ, ದಾಳಿ, ಮಾನಸಿಕ ಹಿಂಸೆ, ರಾಜೀನಾಮೆ ಇವೆಲ್ಲಾ ಹೇಳಕ್ಕಾಗಲ್ಲವಲ್ಲ? ಅವರ ಕೋಪ ತಾಪ ಹೊರಗೆ ಹಾಕಬೇಕಲ್ಲ. ಕಾಂಗ್ರೆಸ್‌ನವರು ಉಚಿತವಾಗಿದ್ದೀವೆಂದು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮನ್ನು ಶಾಶ್ವತವಾಗಿ ವಿರೋಧಪಕ್ಷದಲ್ಲಿ ಕೂರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಏನಾಗ್ತಿದೆ ಎಂದು ಅವರ ಸಚಿವರು ಹಾಗೂ ಶಾಸಕರೆಲ್ಲರಿಗೂ ಗೊತ್ತಿದೆ. ನಾನ್ಯಾಕೆ ಮಾತನಾಡಲಿ?' ಎಂದು ಕೇಳಿದರು.

ADVERTISEMENT

'ಸರ್ಕಾರವನ್ನು ಅವರ ಪಕ್ಷದವರೇ ಅಸ್ಥಿರಗೊಳಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷದವರಿಗೇ ರಾಜ್ಯದ ಪಕ್ಷದವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಗುತ್ತಿಲ್ಲ' ಎಂದು ಲೇವಡಿ ಮಾಡಿದರು.

ವಿಧಾನಪರಿಷತ್ ಬೆಳಗಾವಿ ಕ್ಷೇತ್ರದ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನದ್ದೇ ಹೊರತು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನಡುವಿನದ್ದಲ್ಲ ಎಂದು ಪ್ರತಿಕ್ರಿಯಿಸಿದರು.

ಎಲ್ಲ‌ ಪಕ್ಷಗಳಲ್ಲೂ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದರು.ಯುವಕರಿಗೆ ಅವಕಾಶ ಕೊಡಬೇಕು ಎಂಬ ಜಿಲ್ಲೆಯ ಎಲ್ಲ ನಾಯಕರ ಒಮ್ಮತದಂತೆ ಅಭ್ಯರ್ಥಿಯಾಗಿ ‌ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ಕೊಡಲಾಗಿದೆ ಎಂದು ಸಮರ್ಥಿಸಿಕೊಂಡರು.

'ಡಿ.14ರಂದು ಡಿಕೆಶಿ ವಿರುದ್ಧ ಓಪನ್ ವಾರ್ ಆಗಲಿ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ 'ಇಂಥದ್ದೆಲ್ಲಾ ಎಷ್ಟೋ ನೋಡಿದ್ದೀವಿ ಬಿಡಪ್ಪ' ಎಂದಷ್ಟೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.