
ಅತುಲ್ ಶಿರೋಲೆ
ಬೆಳಗಾವಿ: ಮಲೇಷ್ಯಾದ ಕ್ವಾಲಾಲಂಪುರದಲ್ಲಿ 2026ರ ಜ.12ರಿಂದ 17ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ಕುಸ್ತಿ ತಂಡದ ಮುಖ್ಯ ತರಬೇತುದಾರರಾಗಿ ತಾಲ್ಲೂಕಿನ ಮುಚ್ಚಂಡಿಯ ಅಂತರರಾಷ್ಟ್ರೀಯ ಕುಸ್ತಿಪಟು ಅತುಲ್ ಶಿರೋಲೆ ಅವರನ್ನು ನೇಮಕ ಮಾಡಲಾಗಿದೆ.
ಇಂಟರ್ನ್ಯಾಷನಲ್ ಒಲಿಂಪಿಕ್ಸ್ ಸ್ಪೋರ್ಟ್ಸ್ ಆರ್ಗನೈಸೇಷನ್ ಕಮಿಟಿ ಹಾಗೂ ವರ್ಲ್ಡ್ ಫೆಡರೇಷನ್ ಆಫ್ ಮಿಷನ್ ಒಲಿಂಪಿಕ್ಸ್ ಗೇಮ್ಸ್ ಅಸೋಸಿಯೇಷನ್ ಈ ಟೂರ್ನಿ ಆಯೋಜಿಸಿದೆ.
ಪೈಲ್ವಾನರ ಮನೆತನದ ಹಿನ್ನೆಲೆಯ, 29 ವರ್ಷದ ಅತುಲ್ ಅವರಿಗೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಹಲವು ಪದಕಗಳು ಒಲಿದಿವೆ. ಸದ್ಯ ಇಲ್ಲಿನ ಮರಾಠ ಮಂಡಳ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಭಾರತ ಕುಸ್ತಿ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿದ್ದಕ್ಕೆ ಖುಷಿಯಾಗಿದೆ. ಟೂರ್ನಿಗೂ ಮುನ್ನ ಮುಂಬೈನಲ್ಲಿ ನಡೆಯಲಿರುವ ಶಿಬಿರದಲ್ಲಿ ಪಾಲ್ಗೊಳ್ಳುವೆ. ದೇಶಕ್ಕೆ ಹೆಚ್ಚಿನ ಪದಕಗಳನ್ನು ತರುವುದೇ ನನ್ನ ಗುರಿ’ ಎಂದು ಅತುಲ್ ಶಿರೋಲೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.