ಬೆಳಗಾವಿ: ‘ಹೊರವಲಯದ ಕಣಬರ್ಗಿ ಸುತ್ತಮುತ್ತಲಿನ ಜಮೀನುಗಳಲ್ಲಿ ರಾತ್ರಿ ವೇಳೆ ಬಿಡಾಡಿ ದನ–ಕರುಗಳು ಬೆಳೆಗಳನ್ನು ಮೇಯುತ್ತಿರುವುದು ಹಾಗೂ ಹಾಳು ಮಾಡುತ್ತಿರುವುದರಿಂದ ನಮಗೆ ಅಪಾರ ನಷ್ಟ ಉಂಟಾಗುತ್ತಿದೆ. ಸಂಬಂಧಿಸಿದವರು ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ದನಗಳು, ಎತ್ತಿನ ಗಾಡಿಗಳು ಟ್ರ್ಯಾಕ್ಟರ್ಗಳೊಂದಿಗೆ ಬಂದು ಮುಖ್ಯ ರಸ್ತೆ ತಡೆ ನಡೆಸಿದರು. ಇದರಿಂದ ಗೋಕಾಕ ಮಾರ್ಗದ ಕಡೆಗೆ ಮತ್ತು ಅಲ್ಲಿಂದ ನಗರಕ್ಕೆ ಬರುವ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ರೈತ ಮುಖಂಡ ಶಿವಾಜಿ ಸುಂಠಕರ ಮಾತನಾಡಿ, ‘ಸಮಸ್ಯೆ ಬಗೆಹರಿಸುವಂತೆ ನಾವು ಮಹಾನಗರಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ. ಪಾಲಿಕೆಯವರು ಹಾಗೂ ಪೊಲೀಸರಿಗೆ ತಪ್ಪಿತಸ್ಥರನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಕೂಡಲೇ ಅಧಿಕಾರಿಗಳು ನಿಗಾ ವಹಿಸಿ, ರೈತರ ಬೆಳೆಯನ್ನು ಉಳಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಮಾಳಮಾರುತಿ ಸಿಪಿಐ ಸುನೀಲ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದ್ದರು.
ರೈತ ಮುಖಂಡರಾದ ಮುರುಘೇಂದ್ರಗೌಡ ಪಾಟೀಲ, ಸುಧೀರ ಗಡ್ಡೆ, ಸಂಜಯ ಇನಾಮದಾರ, ರಾಘವೇಂದ್ರಗೌಡ ಪಾಟೀಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.