ADVERTISEMENT

ಬೆಳಗಾವಿ | ಹಿಂದೂ ಧರ್ಮ ಒಡೆಯುವುದೇ ರಾಜ್ಯ ಸರ್ಕಾರದ ಅಜೆಂಡಾ: ಮಹಾಂತೇಶ ಕವಟಗಿಮಠ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 7:31 IST
Last Updated 15 ಸೆಪ್ಟೆಂಬರ್ 2025, 7:31 IST
   

ಬೆಳಗಾವಿ: ‘ಹಿಂದೂ ಧರ್ಮ ಒಡೆಯುವುದೇ ಕಾಂಗ್ರೆಸ್‌ ಸರ್ಕಾರದ ಅಜೆಂಡಾ. ಹಾಗಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ನಡೆಸಲಿರುವ ಜಾತಿ ಸಮೀಕ್ಷೆಯಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಉಪಜಾತಿಗಳನ್ನು ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ತೋರಿಸುವ ದುಸ್ಸಾಹಸಕ್ಕೆ ಕೈಹಾಕಿದೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ದೂರಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮೀಕ್ಷೆಗಾಗಿ ಈಗ ಪ್ರಕಟಿಸಿದ ಪಟ್ಟಿಯಲ್ಲಿ ಹಿಂದೂ ಧರ್ಮದ 46 ಉಪಜಾತಿಗಳು ಕ್ರೈಸ್ತ ಧರ್ಮದ ಪಟ್ಟಿಯಲ್ಲಿವೆ. ಈ ಸಮೀಕ್ಷೆ ಮೂಲಕ ಹಿಂದೂ ಧರ್ಮದ ವಿಭಜನೆಗೆ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ’ ಎಂದು ದೂರಿದರು.

‘ಈ ಹಿಂದೆ ನಡೆಸಿದ್ದ ಸಮೀಕ್ಷೆಗಳಲ್ಲೂ ನಮ್ಮ ಮೇಲೆ ಅನ್ಯಾಯವಾಗಿತ್ತು. ಈಗ ಮತ್ತೆ ಹಿಂದೂಗಳಿಗೆ ಕ್ರೈಸ್ತರ ಹಣೆ‍ಪಟ್ಟಿ ಕಟ್ಟುತ್ತಿರುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಆದೇಶ ಹಿಂದಕ್ಕೆ ಪಡೆದು, ಈಗ ಆಗಿರುವ ತಪ್ಪು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಬಿಜೆ‍ಪಿ ವಕ್ತಾರ ಎಂ.ಬಿ.ಝಿರಲಿ, ‘ಹಿಂದೂಗಳಲ್ಲಿ ನೂರಾರು ಉಪಜಾತಿಗಳಿವೆ. ಆದರೆ, ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ಹಿಂದೂ ಧರ್ಮದ 46 ಉ‍ಪಜಾತಿಗಳನ್ನು ಸೇರಿಸಿದ್ದು ಅಂಸವಿಧಾನಿಕ ತೀರ್ಮಾನ. ಇದನ್ನು ಹಿಂದೂಗಳು ಒಪ್ಪಿಕೊಂಡರೆ ಅಧಿಕೃತವಾಗಿ ಮತಾಂತರವಾದಂತೆ. ಹಾಗಾಗಿ ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ಹಿಂದೂ ಉಪಜಾತಿಗಳನ್ನು ಸೇರಿಸಿದ್ದನ್ನು ಸಮೀಕ್ಷೆಯಿಂದ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಸೆ.17ರಂದು ಗಾಂಧಿ ಭವನದಲ್ಲಿ ಸಭೆ ನಡೆಸಿ, ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.