ADVERTISEMENT

ಬ್ರಿಟಿಷರಿಗಿಂತ ಹೆಚ್ಚಾಗಿ ಸಮಾಜ ಒಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ: ಕಟೀಲ್ ಟೀಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 6:18 IST
Last Updated 29 ಸೆಪ್ಟೆಂಬರ್ 2020, 6:18 IST
 ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್    

ಬೆಳಗಾವಿ: ‘ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಬ್ರಿಟಿಷರಿಗಿಂತ ಹೆಚ್ಚಾಗಿ ಸಮಾಜವನ್ನು ಒಡೆದ ಮುಖ್ಯಮಂತ್ರಿ ಇದ್ದರೆ ಅವರು ಸಿದ್ದರಾಮಯ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಮಾಜಿ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಗೌರವದಿಂದ ನಡೆದುಕೊಳ್ಳಬೇಕು ಹಾಗೂ ಮಾತನಾಡಬೇಕು. ಅವರು ಮುಖ್ಯಮಂತ್ರಿ ಇದ್ದಾಗ ಮೂರು ಸಾವಿರ ಜನ ರೈತರು ಆತ್ಮಹತ್ಯೆ ಮಾಡಿಕೊಂಡರು. ಅವರು ಒಬ್ಬ ರೈತರ ಮನೆಗೂ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಲಿಲ್ಲ. ಈಗ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಯೋಗ್ಯತೆ ಏನಿದೆ?’ ಎಂದು ಕೇಳಿದರು.

ADVERTISEMENT

'ನಮ್ಮ ರಾಜ್ಯದಲ್ಲಿ ವೀರಪ್ಪನ್ ನಂತಹ ಹತ್ತಾರು ಹಂತಕರನ್ನು ಕಂಡಿದ್ದೇವೆ. ಅದೇ ರೀತಿಯಲ್ಲಿ ಕಾಂಗ್ರೆಸ್ ನವರು ಆಡಳಿತ ನಡೆಸಿದರು. ಟಿಪ್ಪು ಸುಲ್ತಾನ್ ಜಯಂತಿ ಹೆಸರಲ್ಲಿ ಗಲಭೆ ಸೃಷ್ಟಿಸಿದರು. ಲಿಂಗಾಯತ- ವೀರಶೈವ ಎಂದು ಸಮಾಜ ಒಡೆದರು. ಅಂತಹ ಕೆಟ್ಟ ಮುಖ್ಯಮಂತ್ರಿ ಬೇಡವೆಂದು ಅವರ ತವರಾದ ಮೈಸೂರಿನಲ್ಲೇ ಮನೆಗೆ ಕಳುಹಿಸಿದ್ದಾರೆ. ಎಲ್ಲೇಲ್ಲೋ ನಿಂತು ಗೆಲ್ಲುವ ಪರಿಸ್ಥಿತಿ ಒಬ್ಬ ಮುಖ್ಯಮಂತ್ರಿಯಾಗಿದ್ದವರಿಗೆ ಬಂದಿದೆ. ರಾಜ್ಯದ ಜನರು ಅವರನ್ನು ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ಮನೆಯಲ್ಲಿ ಕುಳಿತುಕೊಳ್ಳಬೇಕು’ ಎಂದು ವಾಗ್ದಾಳಿ ನಡೆಸಿದರು.

‘ಶಿರಾ ಉಪ ಚುನಾವಣೆ: 15 ದಿನಗಳಲ್ಲಿ ಟಿಕೆಟ್ ಘೋಷಣೆ’
ಬೆಳಗಾವಿ:
‘ಶಿರಾ ಉಪ ಚುನಾವಣೆಯಲ್ಲಿ ಟಿಕೆಟ್ ಘೋಷಣೆ ವಿಚಾರದಲ್ಲಿ ಪಕ್ಷವು ಎಲ್ಲ ಬೆಳವಣಿಗೆಗಳನ್ನೂ ಗಮನಿಸಿ, ತೀರ್ಮಾನ ಮಾಡಲಿದೆ. ನಾಲ್ಕೈದು ಆಕಾಂಕ್ಷಿಗಳ ಹೆಸರಿವೆ., ಎಲ್ಲವನ್ನೂ ಪರಿಶೀಲನೆ ಮಾಡುತ್ತಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

‘ಶಿರಾದಲ್ಲಿ ನಮ್ಮ ಕೆಲಸ ಈಗಾಗಲೇ ಆರಂಭವಾಗಿವೆ. ಸಂಘಟನಾತ್ಮಕ ಚಟುವಟಿಕೆಗಳು ನಡೆದಿವೆ. ಶಿರಾದಲ್ಲಿ ಬಿಜೆಪಿ ಗೆಲುವಿನ ವಾತಾವರಣ ಕಂಡುಬರುತ್ತಿದೆ. ಹತ್ತರಿಂದ ಹದಿನೈದು ದಿನಗಳಲ್ಲಿ ಟಿಕೆಟ್ ಘೋಷಣೆ ಮಾಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಹೋರಾಟ ನಡೆದಿರುವ ಬಗ್ಗೆ ಪ್ರತಿಕ್ರಿಯೆ ‌ನೀಡಿದ ಅವರು, 'ಈ ವಿಷಯದಲ್ಲಿ ಕಾಂಗ್ರೆಸ್ ಕೀಳು ರಾಜಕಾರಣ ಮಾಡುತ್ತಿದೆ. ರೈತರನ್ನ ಎತ್ತಿ ಕಟ್ಟಿ ರಾಷ್ಟ್ರದಲ್ಲಿ ಜನವಿರೋಧಿ ನೀತಿ ಅನುಸರಿಸುತ್ತಿದೆ.
ರಾಜಕಾರಣಕ್ಕೋಸ್ಕರ ದ್ವೇಷ ಹುಟ್ಟಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದೆ' ಎಂದು ಆರೋಪಿಸಿದರು.

‘ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲೇ, ಈ ಎಲ್ಲ ಕಾಯ್ದೆಗಳಿಗೆ ತಿದ್ದುಪಡಿ ತರಬೇಕು ಎಂದು ಹೇಳಿತ್ತು. ಅತ್ಯುತ್ತಮವಾಗಿರುವ ಹಾಗೂ ರೈತರ ಪರವಾಗಿರುವ ಕಾಯ್ದೆ ಇದು. ರೈತರಿಗೆ ನೇರವಾದ ಮಾರುಕಟ್ಟೆ ಕೊಡಬೇಕು ಎಂಬ ಬೇಡಿಕೆ ಇತ್ತು. ಆ ಬೇಡಿಕೆ ಪ್ರಕಾರ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಿದೆ. ರೈತರಿಗೆ ಮನದಟ್ಟು ಮಾಡುವ ಕೆಲಸವನ್ನು ಪಕ್ಷದಿಂದ ಕೈಗೊಳ್ಳುತ್ತೇವೆ. ಇದರ ಮಧ್ಯೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡಬಾರದು’ ಎಂದರು.

‘ಕಾಂಗ್ರೆಸ್ ಅಧಿಕಾರ ಇಲ್ಲದಿದ್ದಾಗ ಬೆಂಕಿ ಹಾಕುವ ಕೆಲಸ, ಅಧಿಕಾರ ಇದ್ದಾಗ ಭ್ರಷ್ಟಾಚಾರ ಮಾಡುತ್ತದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.