ಖಾನಾಪುರ: ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆದ ನಾಲ್ವರಿಂದ ಒಟ್ಟು ₹2,000 ದಂಡವನ್ನು ಪಟ್ಟಣ ಪಂಚಾಯಿತಿ ವಸೂಲಿ ಮಾಡಿದೆ.
‘ಕಸ ಸಂಗ್ರಹಿಸುವ ವಾಹನಕ್ಕೆ ತ್ಯಾಜ್ಯ ಹಾಕದೆ, ಎಲ್ಲೆಂದರಲ್ಲಿ ಕಸ ಎಸೆಯುವವರಿಂದ ದಂಡ ವಸೂಲಿ ಮಾಡಲು ಮಂಗಳವಾರದಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ’ ಎಂದು ಮುಖ್ಯಾಧಿಕಾರಿ ಸಂತೋಷ ಕುರಬೆಟ್ ಹೇಳಿದರು.
‘ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವನ್ನು ತ್ಯಾಜ್ಯ ಸಂಗ್ರಹ ವಾಹನಕ್ಕೆ ಹಾಕುವಂತೆ ಸೂಚಿಸಲಾಗಿದೆ. ಪ್ರತಿಯೊಂದು ವಾರ್ಡ್, ಬೀದಿ, ರಸ್ತೆ ಹಾಗೂ ಗಲ್ಲಿಗಳಲ್ಲಿ ಕಸದ ವಾಹನಗಳು ನಿಯಮಿತವಾಗಿ ಸಂಚರಿಸುತ್ತಿವೆ. ಆದರೂ, ಕೆಲವರು ರಸ್ತೆ ಪಕ್ಕದಲ್ಲೇ ಕಸ ಎಸೆಯುತ್ತಿದ್ದಾರೆ. ಇದರಿಂದ ಬೀದಿ ನಾಯಿಗಳು ಮತ್ತು ಹಂದಿಗಳು ಕಸ ಹರಡುತ್ತಿದ್ದು, ದುರ್ನಾತ ಆವರಿಸಿದೆ. ಚರಂಡಿಯಲ್ಲಿ ಕಸ ಸಿಲುಕಿ, ಕೊಳಚೆ ನೀರು ಮುಂದೆ ಹರಿಯದೆ ಅನೈರ್ಮಲ್ಯದ ವಾತಾವರಣ ನಿರ್ಮಾಣಲಾಗಿದೆ’ ಎಂದರು.
‘ನಾಗರಿಕರು ಬೀದಿ ಬದಿ ಕಸ ಎಸೆಯುವುದನ್ನು ತಡೆಯುವ ಉದ್ದೇಶದಿಂದ ಇಬ್ಬರು ಸಮುದಾಯ ನಿರ್ವಾಹಕಿಯರನ್ನು ನೇಮಿಸಲಾಗಿದೆ. ಇವರು ಪಟ್ಟಣದ ಬೀದಿ–ಬೀದಿಗಳಲ್ಲಿ ಸಂಚರಿಸಿ, ನಿಯಮ ಪಾಲನೆ ಮಾಡದವರಿಗೆ ದಂಡ ವಿಧಿಸಲಿದ್ದಾರೆ. ಪಟ್ಟಣದ ಸ್ವಚ್ಛತೆ ಕಾಪಾಡಲು ನಾಗರಿಕರು ಸಹಕರಿಸಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.