ADVERTISEMENT

ಕನ್ನಡ ಧ್ವಜ ತೆರವುಗೊಳಿಸಿ ಎಂದು ಮಹಾರಾಷ್ಟ್ರಕ್ಕೆ ಹೋಗಿ ಹೇಳಿ: ಡಿಸಿಎಂ ಸವದಿ

ಎಂಇಎಸ್ ಮುಖಂಡರಿಗೆ ಸವದಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 11:04 IST
Last Updated 8 ಜನವರಿ 2021, 11:04 IST
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ    

ಬೆಳಗಾವಿ: ‘ಕನ್ನಡ ನೆಲದಲ್ಲಿ ಕನ್ನಡ ಧ್ವಜ ಹಾರಿಸುವುದು ನಮ್ಮ ಹಕ್ಕು. ಅದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ತೆರವುಗೊಳಿಸುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯವರು ಹೇಳುವುದಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ ಹೇಳಲಿ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿರುಗೇಟು ನೀಡಿದರು.

ಇಲ್ಲಿನ ಮಹಾನಗರಪಾಲಿಕೆ ಮುಂಭಾಗ ಹಾರಿಸಿರುವ ಕನ್ನಡ ಧ್ವಜವನ್ನು ಜ.21ರ ಒಳಗೆ ತೆರವುಗೊಳಿಸಬೇಕೆಂದು ಎಂಇಎಸ್‌ನವರು ಗಡುವು ವಿಧಿಸಿರುವುದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಸವದಿ, ‘ಅವರು ಕಾನೂನು ಅಥವಾ ಮಿತಿ ಮೀರಿ ಮಾತನಾಡಿದರೆ ಅಥವಾ ನಡೆದುಕೊಂಡರೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು’ ಎಂದು ತಿಳಿಸಿದರು.

‘ರಾಜಕಾರಣಿಗಳ ಹೆಸರಿನಲ್ಲಿ ಹಲವರಿಗೆ ವಂಚಿಸಿರುವ ಆರೋಪದಲ್ಲಿ ಸಿಸಿಬಿ ಬಂಧಿಸಿರುವ ಆರೋಪಿ ಯುವರಾಜ್‌ (ಸ್ವಾಮಿ), ನನಗೆ ಗೊತ್ತಿರುವಂತೆ ಚಿತ್ರದುರ್ಗದ ಮಠವೊಂದರಲ್ಲಿ ಸ್ವಾಮಿಯಾಗಿದ್ದ. ಆ ಮಠದಿಂದ ಹೊರ ಹಾಕಿದ್ದರು. ಬಳಿಕ ಬೆಂಗಳೂರಿಗೆ ಬಂದು ನೆಲೆಸಿ, ಆರ್‌ಎಸ್‌ಎಸ್‌ ಮುಖಂಡ ಎಂದು ಹೇಳಿಕೊಂಡಿದ್ದರು. ಬಿಜೆಪಿಯ ಅನೇಕ ಮುಖಂಡರನ್ನು ಭೇಟಿಯಾಗಿ ಫೋಟೊ ತೆಗೆಸಿಕೊಂಡಿದ್ದರು. ನನಗೂ ಒಮ್ಮೆ ಮಾಲೆ ಹಾಕಿ ಶುಭಾಶಯ ಕೋರಿದ್ದರು. ಯಾರಾದರೂ ಬಂದು ಶುಭ ಕೋರಿದಾಗ, ಸಹಜವಾಗಿಯೇ ಸ್ವೀಕರಿಸುತ್ತೇವೆ. ಆದರೆ, ಆತನಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಆತನಿಗೆ ಸಿನಿಮಾ ನಟ–ನಟಿಯರೊಂದಿಗೂ ಸಂಬಂಧವಿದೆ. ಹಣಕಾಸಿನ ಅವ್ಯವಹಾರ ಆಗಿರುವುದೂ ಮೇಲ್ನೊಟಕ್ಕೆ ಕಂಡುಬಂದಿದೆ. ಅನೇಕರಿಗೆ ಮೋಸ ಮಾಡಿದ್ದಾರೆ ಎಂದು ವರದಿಯಾಗಿದ್ದು, ಸಿಸಿಬಿ ತನಿಖೆ ನಡೆಯುತ್ತಿದೆ. ಅವರ ವಿರುದ್ಧ ಕಾನೂನು ಕ್ರಮವಾಗಲಿದೆ’ ಎಂದರು.

‘ಅವರಿಗೆ ಬೆಳಗಾವಿಯ ರಾಜಕಾರಣಿಯೊಬ್ಬರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಟಿಕೆಟ್‌ಗಾಗಿ ₹ 10 ಕೋಟಿ ಕೊಟ್ಟಿದ್ದರು ಎನ್ನುವುದಕ್ಕೆ ದಾಖಲೆ ಇಲ್ಲ. ಟಿವಿಗಳಲ್ಲಿ ಆ ಸುದ್ದಿ ಆಗುತ್ತಿರುವುದನ್ನು ಗಮನಿಸಿದ್ದೇನೆ. ಆದರೆ ಆ ಬಗ್ಗೆ ಮಾಹಿತಿ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸಚಿವ ಸಂಪುಟ ವಿಸ್ತರಣೆಯನ್ನು ಶೀಘ್ರದಲ್ಲೇ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.