ADVERTISEMENT

ಗ್ರಾಂ. ಪಂ ಅಧ್ಯಕ್ಷೆಗೆ ಜೀವ ಬೆದರಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 11:25 IST
Last Updated 27 ಜೂನ್ 2018, 11:25 IST
ಚಿಕ್ಕೋಡಿ ತಾಲ್ಲೂಕಿನ ಜೈನಾಪೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಕಾಂಬಳೆ ತಮಗೆ ಗ್ರಾಮ ಪಂಚಾಯ್ತಿಯ ಕೆಲ ಸದಸ್ಯರಿಂದ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಚಿಕ್ಕೋಡಿ ತಾಲ್ಲೂಕಿನ ಜೈನಾಪೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಕಾಂಬಳೆ ತಮಗೆ ಗ್ರಾಮ ಪಂಚಾಯ್ತಿಯ ಕೆಲ ಸದಸ್ಯರಿಂದ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು   

ಚಿಕ್ಕೋಡಿ: ‘ಸರ್ಕಾರದ ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಬಲವಂತವಾಗಿ ನನ್ನ ಸಹಿ ಮಾಡಿಸಿಕೊಂಡು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿರುವ ಗ್ರಾಮ ಪಂಚಾಯ್ತಿಯ ಕೆಲವು ಸದಸ್ಯರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ’ ಎಂದು ಆರೋಪಿಸಿ ತಾಲ್ಲೂಕಿನ ಜೈನಾಪೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಕಲ್ಲಪ್ಪಾ ಕಾಂಬಳೆ ಆರೋಪಿಸಿದ್ದಾರೆ.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಪಾಟೀಲ ಅವರಿಗೆ ಈ ಕುರಿತು ಮನವಿ ಸಲ್ಲಿಸಿ ಮಾತನಾಡಿ, ‘ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆಲವು ಸದಸ್ಯರು ಯೋಜನೆಗಳ ಅಡಿ ಕೈಗೊಂಡ ಕಾಮಗಾರಿಗಳಿಗೆ ಬಲವಂತವಾಗಿ ನನ್ನ ಸಹಿ ಮಾಡಿಸಿಕೊಂಡು ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ನಾನು ಒಬ್ಬ ದಲಿತ ಮಹಿಳೆ ಎನ್ನುವ ಕಾರಣದಿಂದ ನನ್ನನ್ನು ಕಷ್ಟದಲ್ಲಿ ಸಿಲುಕಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದರು.

‘ಜೈನಾಪೂರ ಗ್ರಾಮ ಪಂಚಾಯ್ತಿ ಸದಸ್ಯರಾದ ದುಂಡಪ್ಪ ಬಸಪ್ಪಾ ಘರಬುಡೆ, ರಮೇಶ ಸುಳಕುಡೆ, ಪರಶುರಾಮ ತಳಕೇರಿ, ಮಹಾದೇವಿ ಬಾಕರೆ, ಅಣ್ಣಪ್ಪಾ ಮಂಗಾಜ, ಉಮಾಶ್ರೀ ನಿಂಗನೂರೆ, ಸಾವಿತ್ರಿ ನಿಪ್ಪಾಣಿ ಅವರು ನಾವು ಹೇಳಿದಲ್ಲಿ ಸುಮ್ಮನೆ ಸಹಿ ಮಾಡದಿದ್ದರೆ ನಿನ್ನನ್ನು ಹಾಗೂ ನಿನ್ನ ಮಕ್ಕಳನ್ನು ಬಿಡುವುದಿಲ್ಲ’ ಎಂದು ಹೆದರಿಸುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದ್ದು, ನನಗೆ ಸೂಕ್ತ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

‘ಜೈನಾಪೂರ ಗ್ರಾಮ ಪಂಚಾಯ್ತಿಯಲ್ಲಿ ಬಾವಿಗಳು ಕಳುವಾಗಿವೆ ಎಂದು ಕೆಲವರು ನರೇಗಾ ಒಂಬುಡ್ಸಮನ್ ಅಧಿಕಾರಿ ಎ.ಜಿ. ಧುಮಾಳೆ ಅವರಿಗೆ ನೀಡಿರುವ ದೂರು ಸತ್ಯಕ್ಕೆ ದೂರವಾಗಿದೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಕಾಂಬಳೆ ತಿಳಿಸಿದ್ದಾರೆ.

‘2015-16ನೇ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಬಾವಿ ತೆಗೆಯಲು ನೀಡಿದ ಹಣವನ್ನು ಆಯ್ಕೆಗೊಂಡ ಫಲಾನುಭವಿಗಳು ಬಾವಿ ತೆಗೆಯಿಸಿಕೊಂಡು ಹಣದ ಸದ್ಭಳಕೆ ಮಾಡಿಕೊಂಡಿದ್ದಾರೆ. ಆದರೆ, ಸ್ಥಳೀಯ ರಾಜಕೀಯ ದುರುದ್ದೇಶದಿಂದ ಕೆಲವರು ಬಾವಿ ತೆಗೆಯುವಲ್ಲಿ ಅವ್ಯವಹಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಜನರು ಮತ್ತು ಅಧಿಕಾರಿಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.