ಬೆಳಗಾವಿ: ‘ಲಿಂಗಾಯತವು ಪ್ರತ್ಯೇಕ ಧರ್ಮ ಎಂಬ ವಿಷಯ ಹೇಗೆ ಬಂತೋ ಗೊತ್ತಿಲ್ಲ; ಆದರೆ, ಬಂದಂತೆಯೇ ಹೋಯಿತು‘ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಭಾನುವಾರ ಇಲ್ಲಿ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವೀರಶೈವ, ಲಿಂಗಾಯತ ಎರಡೂ ಒಂದೇ ಎನ್ನುವುದನ್ನು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದೇವೆ. ಇನ್ನು ಮುಂದೆ ಒಳಪಂಗಡಗಳ ನಡುವಿನ ಅಂತರ ಕುಗ್ಗಿಸಲು ಹೆಣ್ಣು ಕೊಡುವುದು– ತೆಗೆದುಕೊಳ್ಳುವುದನ್ನು ಮಾಡಬೇಕು. ಒಗ್ಗಟ್ಟಿನಿಂದ ಇರಬೇಕು. ಮಹಾಸಭಾ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷದವರೂ ಇದ್ದು, ಸಮಾಜದ ವಿಷಯದಲ್ಲಿ ಎಲ್ಲರೂ ಒಂದಾಗುತ್ತಾರೆ’ ಎಂದರು.
‘ಶೇ 51 ಮಂದಿ ಶಿಕ್ಷಣದಿಂದ ದೂರ!’
‘ವೀರಶೈವ ಲಿಂಗಾಯತರಲ್ಲಿ, ಶೇ 51 ಮಂದಿ ಶಿಕ್ಷಣದಿಂದ ದೂರ ಉಳಿದಿದ್ದಾಗಿ ಎಂದು ಈಚೆಗೆ ನಡೆದ ಸಮೀಕ್ಷೆಯಿಂದ ತಿಳಿದುಬಂದಿದೆ’ ಎಂದು ಮಹಾಸಭಾದ ಉಪಾಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಕಳವಳ ವ್ಯಕ್ತಪಡಿಸಿದರು.
‘ಅದರಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಜಾಸ್ತಿ ಇದ್ದು, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಇನ್ನೂ ಹೆಚ್ಚು ಇದೆ. ಇದಕ್ಕೆ ಕಾರಣ ತಿಳಿದು, ಶಿಕ್ಷಣದಲ್ಲಿ ಮುಂದೆ ಬರಲು ಏನು ಮಾಡಬೇಕೆನ್ನುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು’ ಎಂದು ಸಲಹೆ ನೀಡಿದರು.
‘ಸಮಾಜದವರು, ಹಾಸ್ಟೆಲ್ ಸೌಲಭ್ಯ ಇಲ್ಲವೆಂದು ಓದುವುದನ್ನು ನಿಲ್ಲಿಸುವುದು ಕಂಡುಬರುತ್ತದೆ. ನಮ್ಮ ಸಮಾಜದ ಕೆಲವರು ಪರಿಶಿಷ್ಟ ಜಾತಿ, ಪಂಗಡದವರ ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಓದುವುದನ್ನೂ ನೋಡಿದ್ದೇನೆ. ಅಲ್ಲಿ ಇರಬಾರದು ಎಂದೇನಿಲ್ಲ. ಆದರೆ, ಅಲ್ಲಿ ನಮ್ಮ ಸಮಾಜದ ಸಂಸ್ಕಾರ ಇರುವುದಿಲ್ಲ. ಹೀಗಾಗಿ, ಬೆಳಗಾವಿಯಲ್ಲೂ ಬಾಲಕಿಯರ ಹಾಸ್ಟೆಲ್ ನಿರ್ಮಿಸಲಾಗುವುದು’ ಎಂದು ತಿಳಿಸಿದರು.
**
ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಹೆಚ್ಚಿನವರು ನಮ್ಮ ಸಮಾಜದವರೇ ಇದ್ದಾರೆ. ನಮ್ಮವರು ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಹಿಸುವುದಿಲ್ಲ.
-ಪ್ರಭಾಕರ ಕೋರೆ,ರಾಜ್ಯಸಭಾ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.