ಬೆಳಗಾವಿ: ‘ಕೃಷ್ಣಾ ನದಿಗೆ ನೀರು ಪಡೆಯಬೇಕಾದರೆ ತನ್ನೊಂದಿಗೆ ‘ನೀರಿಗೆ ನೀರು’ ಒಪ್ಪಂದ ಮಾಡಿಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರ ಕಳುಹಿಸಿದ್ದ ಒಡಂಬಡಿಕೆ ಪತ್ರದಲ್ಲಿ (ಎಂಒಯು) ಒಂದಿಷ್ಟು ಪರಿಷ್ಕರಣೆ ಮಾಡಿ, ಮರಳಿ ಕಳುಹಿಸಲಾಗಿದೆ’ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಷ್ಟು ವರ್ಷಗಳ ಕಾಲ ಕೋಯ್ನಾ ಜಲಾಶಯದಿಂದ ನೀರು ಪಡೆಯಲು ಹಣ ನೀಡುತ್ತಿದ್ದೇವು. ಆದರೆ, ಈ ಸಲ ಮಹಾರಾಷ್ಟ್ರ ಸರ್ಕಾರವು ತನಗೆ ಹಣ ಬೇಡ. ಸಾಂಗ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ನೀರು ನೀಡಬೇಕೆಂದು ಕೇಳಿಕೊಂಡಿತ್ತು. ಅದರ ಬಗ್ಗೆ ಜಲಸಂಪನ್ಮೂಲ ಅಧಿಕಾರಿಗಳ ಜೊತೆ ಚರ್ಚಿಸಿ, ರಾಜ್ಯದ ಹಿತದೃಷ್ಟಿಯಿಂದ ಒಂದಿಷ್ಟು ಬದಲಾವಣೆ ಸೂಚಿಸಿ, ಎಂಒಯು ವಾಪಸ್ ಕಳುಹಿಸಿದ್ದೇವೆ’ ಎಂದರು.
‘ಆಲಮಟ್ಟಿ ಜಲಾಶಯದಿಂದ ಬಬಲೇಶ್ವರ ಏತ ನೀರಾವರಿಗೆ ಹರಿದು ಬರುವ ನೀರನ್ನು ಅತ್ತ ಹರಿಸಲು ಯಾವುದೇ ಮೂಲ ಸೌಕರ್ಯ ಇಲ್ಲ. ಇದು ಬಹುವರ್ಷಗಳ ಬೇಡಿಕೆಯಾಗಿದ್ದು, ಇದರ ಬಗ್ಗೆ ತೀರ್ಮಾನ ಕೈಗೊಳ್ಳಲು ಸಮಯ ಬೇಕಾಗುತ್ತದೆ’ ಎಂದು ಹೇಳಿದರು.
‘ಒಪ್ಪಂದ ಆಗುವವರೆಗೆ ಕಾಯದೇ ಮಾನವೀಯತೆ ಆಧಾರದ ಮೇಲೆ ನೀರು ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಿದ್ದೇವೆ. ಸದ್ಯದಲ್ಲಿಯೇ ನೀರು ಹರಿಸುವ ವಿಶ್ವಾಸ ತಮಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.