ಬೆಳಗಾವಿ: ‘ವೈದ್ಯವಿಜ್ಞಾನದಲ್ಲಿ ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಲಿದೆ. ಅದಕ್ಕೆ ಅನುಗುಣವಾಗಿ ವೈದ್ಯಕೀಯ ಮಹಾವಿದ್ಯಾಲಯಗಳೂ ತಾಂತ್ರಿಕತೆ ಅಳವಡಿಸಿಕೊಂಡು ಅತ್ಯಾಧುನಿಕ ರೀತಿಯಲ್ಲಿ ಕಲಿಕೆಗೆ ಪೂರಕ ಅವಕಾಶ ಕೊಡಬೇಕು’ ಎಂದುಬೆಂಗಳೂರಿನ ಅಲ್ಟಿಸ್ ಆಸ್ಪತ್ರೆಯ ಡಾ.ಬಿ.ರಮೇಶ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸ್ತ್ರೀರೋಗ ಮತ್ತು ಹೆರಿಗೆ ವಿಭಾಗವು ಶನಿವಾರ ಏರ್ಪಡಿಸಿದ್ದ 3ಡಿ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ನೇರ ಪ್ರಾತ್ಯಕ್ಷಿಕೆ– ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಲಿಕೆಯ ಹಂತದಲ್ಲಿಯೇ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಅಗತ್ಯತೆಗಳನ್ನು ಪೂರೈಸಿ, ಅವರೂ ನುರಿತ ತಜ್ಞವೈದ್ಯರಾಗಿ ಸೇವೆಗೆ ಅಣಿಯಾಗಿ ನಿಲ್ಲಬೇಕು. ಯುವ ವೈದ್ಯ ಸಮೂಹದ ಜವಾಬ್ದಾರಿ ಅದರಲ್ಲಿಯೂ ಹೆರಿಗೆ ಮತ್ತು ಸ್ತ್ರೀರೋಗ ವ್ಶೆದ್ಯರಿಗೆ ಹೆಚ್ಚನ ಜವಾಬ್ದಾರಿ ಇದೆ ಎಂದರು.
ಪುಣೆಯ ಗ್ಯಾಲಕ್ಸಿ ಆಸ್ಪತ್ರೆಯ ಡಾ.ಶೈಲೇಶ್ ಪುಟಂಬೇಕರ ಮಾತನಾಡಿ, ವೈದ್ಯಕೀಯ ಕಾಲೇಜಗಳು ಲ್ಯಾಪ್ರೊಸ್ಕೋಪಿ ಶಸ್ತ್ರಚಿಕಿತ್ಸೆಯನ್ನು ಹೆಚ್ಚಾಗಿ ಪ್ರೇರೇಪಿಸಬೇಕು. 15 ವರ್ಷಗಳ ನಂತರ ಇದು ಹೆಚ್ಚಾಗಿ ಬಳಕೆಯಾಗುತ್ತಲಿದೆ. ಕಲಿಕೆ ಹಾಗೂ ತಿಳಿದುಕೊಳ್ಳುವುದು ಮುಖ್ಯ’ ಎಂದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಮಾತನಾಡಿ, ಚಿಕ್ಕ ರಂಧ್ರದ ಮೂಲಕ ನಡೆಸುವ ಶಸ್ತ್ರಚಿಕಿತ್ಸೆ ಅತ್ಯಂತ ಪರಿಣಾಮಕಾರಿ. ಅನೇಕ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಶಸ್ತ್ರಚಿಕಿತ್ಸೆ ಲ್ಯಾಪ್ರೊಸ್ಕೋಪಿಕ್ ಮೂಲಕ ವ್ಯವಸ್ಥೆ ಮಾಡಲಾಗಿದೆ ಎಂದರು.
ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ.ವಿಶ್ವನಾಥ ಪಟ್ಟಣಶೆಟ್ಟಿ ಮಾತನಾಡಿದರು. ಡಾ.ಶೈಲೇಶ ಪ್ಮಟಂಬೇಕರ, ಡಾ.ಬಿ.ರಮೇಶ, ಡಾ.ಜಯಪ್ರಕಾಶ ಪಾಟೀಲ, ಡಾ.ಸುಭಾಷ ಮಲ್ಲಯ್ಯ, ಡಾ.ವಿಜಯಕುಮಾರ ಕೊರವಿ ಅವರನ್ನು ಸತ್ಕರಿಸಲಾಯಿತು. ಡಾ.ಎಂ.ಬಿ. ಬೆಲ್ಲದ, ಡಾ.ಅನಿತಾ ದಲಾಲ, ಡಾ.ಎಂ.ಸಿ. ಮೆಟಗುಡ್ ಅನೇಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.