ನಿಪ್ಪಾಣಿ: ‘ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನ ತಂದು ಸುಮಾರು 2 ಎಕರೆ ಜಾಗದಲ್ಲಿ 86 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಅವುಗಳಲ್ಲಿ 46 ವಸತಿಗಳು ಪೂರ್ಣಗೊಂಡಿದ್ದು, ಡಾ.ಬಾಬಾಸಾಹೇಬ ಅಂಬೇಡ್ಕರರ ಜನ್ಮದಿನವಾದ ಏ.14ರಂದು ಉದ್ಘಾಟಿಸಿ ಪೌರಕಾರ್ಮಿಕರ ಗೃಹಪ್ರವೇಶಕ್ಕೆ ಅನುವು ಮಾಡಿಕೊಳ್ಳಲಾಗುವುದು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಭಾನುವಾರ ನಗರೋತ್ಥಾನದಡಿ ಪರಿಶಿಷ್ಠ ಜಾತಿಯ ₹1.65 ಕೋಟಿ ಅನುದಾನ, ಪರಿಶಿಷ್ಠ ಪಂಗಡದ ₹70.90 ಲಕ್ಷ ಅನುದಾನ, ಇತರೆ ಬಡಜನರ ಕಲ್ಯಾಣದ ₹92.44 ಲಕ್ಷ ಅನುದಾನ ಹೀಗೆ ಒಟ್ಟು ಸುಮಾರು ₹3.28 ಕೋಟಿಗಳ ವಿವಿಧ ಕಾಮಗಾರಿಗಳಿಗೆ ಅವರು ಚಾಲನೆ ನೀಡಿ ಮಾತನಾಡಿದರು.
‘ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾದ ಮನೆಗಳ ಬಡಾವಣೆಯಲ್ಲಿ ₹52.91 ಲಕ್ಷ ಅನುದಾನದಲ್ಲಿ ಆಂತರಿಕ ರಸ್ತೆ ಮತ್ತು ಚರಂಡಿ ನಿರ್ಮಾಣ, ವಾರ್ಡ್ ನಂ.27ರ ಭೀಮನಗರದಲ್ಲಿ ವಿದ್ಯಾ ಮಂದಿರದಿಂದ ಉರ್ದು ಶಾಲೆಯವರೆಗೆ ₹20 ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ’ ಎಂದರು.
ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಉಪಾಧ್ಯಕ್ಷ ಸಂಜಯ ಸಾಂಗಾವಕರ, ಸ್ಥಾಯಿ ಸಮಿತಿ ಚೇರಮನ್ ಡಾ. ಜಸರಾಜ ಗಿರೆ, ಸದಸ್ಯ ರಾಜೇಂದ್ರ ಗುಂದೇಶಾ, ವಿಲಾಸ್ ಗಾಡಿವಡ್ಡರ, ಜಯವಂತ ಭಾಟಲೆ, ಸುರೇಖ ದೇಸಾಯಿ-ಸರ್ಕಾರ, ಸುಜಾತಾ ಕದಮ, ಪ್ರಭಾವತಿ ಸೂರ್ಯವಂಶಿ, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ರಾಜೇಶ ಕೊಠಡಿಯಾ, ಬಂಡಾ ಘೋರ್ಪಡೆ, ಪ್ರಣವ ಮಾನವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.