
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಬೆಳಗಾವಿ: ‘ಹೊಸ ಶಿಕ್ಷಣ ನೀತಿ ಕೇಸರೀಕರಣವಲ್ಲ. ಬದಲಿಗೆ ಅದು ಭಾರತದ ಗೌರವಯುತ ಜ್ಞಾನ ಪರಂಪರೆ ಪ್ರತಿಬಿಂಬಿಸುತ್ತದೆ. ಇಂದು ಭಾರತ ವಿಶ್ವದ ನಾಲ್ಕನೇ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಲು ನಮ್ಮ ಜ್ಞಾನ ಪರಂಪರೆಯೇ ಕಾರಣ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿನ ಕ್ಯಾಂಪ್ ಪ್ರದೇಶದ ಬಿ.ಕೆ.ಮಾಡೆಲ್ ಪ್ರೌಢಶಾಲೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬ್ರಿಟಿಷರು ಭಾರತೀಯರ ಮೇಲೆ ಗುಲಾಮಗಿರಿ ಹೇರುವ ಜತೆಗೆ, ನಮ್ಮ ಮನಸ್ಸಿನಲ್ಲಿ ಕೀಳರಿಮೆ ಬೀಜ ಬಿತ್ತಿದ್ದರು. ಭಾರತ ಬಡ ಮತ್ತು ಅಜ್ಞಾನಿ ರಾಷ್ಟ್ರ ಎಂಬ ಹಣೆಪಟ್ಟಿ ಕಟ್ಟಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಈ ಕೀಳರಿಮೆ ಹೋಗಲಾಡಿಸುವ ಕೆಲಸ ನಡೆಯುತ್ತಿದೆ’ ಎಂದು ತಿಳಿಸಿದರು.
‘ದೇಶದಲ್ಲಿನ ಗುಲಾಮಿತನ ತೆಗೆದುಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ತೊಟ್ಟಿದ್ದಾರೆ. ಹಾಗಾಗಿ ನಾವು ಸ್ವದೇಶಿ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು. ಭಾರತದಲ್ಲಿ ಶಿಕ್ಷಣ ಪದ್ಧತಿ ಅಮೂಲಾಗ್ರವಾಗಿ ಬದಲಾಗಬೇಕು. 2047ರ ವೇಳೆ ಭಾರತ ವಿಕಸಿತ ರಾಷ್ಟ್ರವಾಗಿ ಮುನ್ನಡೆಯಲು ಯುವಪೀಳಿಗೆ ಸಿದ್ಧಗೊಳಿಸಬೇಕು’ ಎಂದು ಕರೆಕೊಟ್ಟರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ಬ್ರಿಟಿಷರ ಕೇಂದ್ರ ಕಚೇರಿಯಾಗಿದ್ದ ಕಾಲದಿಂದಲೂ ಬೆಳಗಾವಿಯು ಮಿಷನರಿ ಶಾಲೆಗಳ ಪ್ರಭಾವ ಹೆಚ್ಚಿತ್ತು. ಅಂಥ ಕಠಿಣ ಸಮಯದಲ್ಲಿ ಧೈರ್ಯವಂತ ಶಿಕ್ಷಕರು ಮತ್ತು ದಾನಿಗಳು ಸೇರಿ ಬಿ.ಕೆ.ಮಾಡೆಲ್ ಶಾಲೆ ಆರಂಭಿಸಿದರು. ಗುಣಾತ್ಮಕ ಶಿಕ್ಷಣದ ಮೂಲಕ ಈ ಶಾಲೆ 100 ವರ್ಷ ಪೂರೈಸಿರುವುದು ಹೆಮ್ಮೆಯ ವಿಷಯ’ ಎಂದು ತಿಳಿಸಿದರು.
ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಸಾಹಿತಿ ಬಸವರಾಜ ಜಗಜಂಪಿ, ಮಾಜಿ ಶಾಸಕ ಸಂಜಯ ಪಾಟೀಲ, ಅವಿನಾಶ ಪೋತದಾರ, ಜಯಂತ ದೇಶಪಾಂಡೆ, ಉಪಸ್ಥಿತರಿದ್ದರು.
ಸಾವಿರಾರು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.