ಬೆಳಗಾವಿ: ಕಾಗವಾಡದಲ್ಲಿ ಜ. 30 ಹಾಗೂ 31ರಂದು ನಡೆಯಲಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಅಧಿಕೃತವಾಗಿ ಆಹ್ವಾನ ನೀಡಿ ಸನ್ಮಾನಿಸಲಾಯಿತು.
ನಗರದ ಅವರ ನಿವಾಸದಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಕಾಗವಾಡ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಸಿದ್ದನಗೌಡ ಕಾಗೆ ಹಾಗೂ ಸದಸ್ಯರು ಕೋರೆ ಅವರಿಗೆ ಕನ್ನಡ ರುಮಾಲು ಕಟ್ಟಿ ಸನ್ಮಾನಿಸಿ ಆಹ್ವಾನ ನೀಡಿದರು. ಇದೇ ವೇಳೆ ಅವರ ಪತ್ನಿ ಆಶಾ ಕೋರೆ ಅವರನ್ನೂ ಸತ್ಕರಿಸಿದರು.
ಈ ವೇಳೆ ಮಾತನಾಡಿದ ಕೋರೆ, ‘ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿಗಳಿಗೆ, ಕವಿಗಳಿಗೆ ಮೀಸಲಾಗಿದೆ. ನಾನು ಸಾಹಿತಿ ಅಲ್ಲದಿದ್ದರೂ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ನೀಡಿದ್ದು ಸಂತಸವಾಗಿದೆ. ಗಡಿ ಭಾಗದ ಕಾಗವಾಡದಲ್ಲಿ ನಡೆಯುವ ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು. ನಾಡಿನ ಇತಿಹಾಸದಲ್ಲಿ ದಾಖಲೆ ನಿರ್ಮಿಸಿ, ಕನ್ನಡ ಸಾಹಿತ್ಯಕ್ಕೆ ಮೆರಗು ತರೋಣ’ ಎಂದು ನುಡಿದರು.
ಸಾಹಿತಿ ಡಾ.ಬಸವರಾಜ ಜಗಜಂಪಿ, ‘ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಬೇಕು. ಸಮಯಕ್ಕೆ ಸರಿಯಾಗಿ ಗೋಷ್ಠಿಗಳನ್ನು ನಡೆಸಬೇಕು. ಕೋರೆ ಅವರು ಸರ್ವಾಧ್ಯಕ್ಷರಾಗಿದ್ದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದದರು.
ಜ್ಯೋತಿ ಬದಾಮಿ, ಎಂ.ವೈ. ಮೆಣಸಿನಕಾಯಿ, ಡಾ.ಹೇಮಾವತಿ ಸೊನೊಳ್ಳಿ, ಪ್ರಕಾಶ ದೇಶಪಾಂಡೆ, ಯ.ರು. ಪಾಟೀಲ, ಶ್ರೀಪಾದ ಕುಂಬಾರ, ಡಾ.ಸೋಮಶೇಖರ ಹಲಸಗಿ, ಬಾಬು ನಾಯಕ, ಗೌರಾದೇವಿ ತಾಳಿಕೋಟಿಮಠ, ಪ್ರೇಮಾ ಅಂಗಡಿ, ಅನ್ನಪೂರ್ಣಾ ಕನೋಜ, ಪಾರ್ವತಿ ಪಾಟೀಲ, ನೀಲಗಂಗಾ ಚರಂತಿಮಠ, ಶಶಿಕಲಾ ಯಲಿಗಾರ, ಭುವನೇಶ್ವರಿ ಪೂಜೇರಿ, ಅಕ್ಕಮಹಾದೇವಿ ತೆಗ್ಗಿ, ಇಂದಿರಾ ಮೊಟೆಬೆನ್ನೂರ, ಸುನಂದಾ ಎಮ್ಮಿ, ಶಾಂತಾ ಮಸೂತಿ, ರಂಜನಾ ಪಾಟೀಲ, ನಿರ್ಮಲಾ ಬಟ್ಟಲ, ಅನಿತಾ ಮೂಗತ್ತಿ, ಜಯಶ್ರೀ ನಿರಾಕಾರಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.