ಬೆಳಗಾವಿ: ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ವಿಚಾರವಾಗಿ ಸದ್ಯಕ್ಕೆ ನಾನೇನೂ ಮಾತನಾಡುವುದಿಲ್ಲ. ನಮಗೆ ಉಪ ಚುನಾವಣೆಗಳಲ್ಲಿ ಗೆಲ್ಲುವುದು ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿದೆ. ಸಹಕಾರ ಕೊಡಿ ಎಂದು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ನೋಡೋಣ ಎಂದು ಪ್ರತಿಕ್ರಿಯಿಸಿದರು.
ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಬಂದ ನಂತರ ತರಬೇತಿ ವಿಭಾಗದ ಜವಾಬ್ದಾರಿ ಕೇಳಿದರು. ಜನರಿಗೆ ಜ್ಞಾನ, ವಿಚಾರ ತಿಳಿಸುವಂಥದು. ನಾಯಕತ್ವ ಬೆಳೆಸುವಂಥದು. ಶಿಸ್ತು ಕಲಿಸುವಂಥದು. ಎಷ್ಡು ನಾಯಕರು ಈ ಕೆಲಸ ಮಾಡಿದ್ದಾರೆ! ಎಲ್ಲರೂ ಆ ಇನ್ಛಾರ್ಜ್ ಕೊಡಿ, ಈ ಇನ್ಛಾರ್ಜ್ ಕೊಡಿ ಎಂದು ಕೇಳಿದರು. ಆದರೆ ಸತೀಶ ತರಬೇತಿ ಕೊಡ್ತೀನಿ ಎಂದರು. ಅಂತಹ ಪ್ರಬಲ ನಾಯಕನಿಗೆ ಈ ಉಪ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿದ್ದೀವಿ. ಈ ಬಗ್ಗೆ ಎಲ್ಲಿಯೂ ಒಂದೇ ಒಂದು ಸಣ್ಣ ಅಪಸ್ವರ ಇಲ್ಲವಲ್ಲ? ಅದೇ ನಮ್ಮ ಶಕ್ತಿ ಎಂದರು.
ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರು ಪಕ್ಷದ ಆಸ್ತಿ ಎಂದು ಹೇಳಿದರು.
ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಅಶೋಕ್ ನೆನ್ನೆ ನನ್ನೊಂದಿಗೆ ಮಾತನಾಡಿದ್ದಾರೆ. ಇಂದೂ ಚರ್ಚಿಸಲಾಗುವುದು. ಪಕ್ಷದ ಹಿರಿಯರ ಜೊತೆ ಚರ್ಚಿಸಬೇಕಿದೆ. ನಂತರ ನಿರ್ಧಾರ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.