ಸಾಂಬ್ರಾ: ಪಶ್ಚಿಮ ಬಂಗಾಳದ ಪಂಜಿಪಾಡಾದಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಚಿಕ್ಕೋಡಿ ತಾಲ್ಲೂಕಿನ ಯಡೂರವಾಡಿಯ ಯೋಧ ಸೂರಜ್ ಸುತಾರ ಅವರ ಪಾರ್ಥಿವ ಶರೀರಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬುಧವಾರ ಗೌರವ ಸಲ್ಲಿಸಲಾಯಿತು.
ದೆಹಲಿಯಿಂದ ವಿಮಾನ ಮೂಲಕ ಪಾರ್ಥಿವ ಶರೀರ ತರಲಾಯಿತು.
ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಶ, ಎಸ್ಪಿ ಸಂಜೀವ್ ಪಾಟೀಲ ಗೌರವ ಸಲ್ಲಿಸಿದರು.
ಬಳಿಕ, ಪಾರ್ಥಿವ ಶರೀರವನ್ನು ಯಡೂರವಾಡಿಗೆ ತೆಗೆದುಕೊಂಡು ಹೋಗಲಾಯಿತು. ಸ್ವಗ್ರಾಮದಲ್ಲೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿದೆ. ಅದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲು ತಯಾರಿ ನಡೆದಿದೆ.
2012ರಲ್ಲಿ ಸೂರಜ್ ಬಿಎಸ್ಎಫ್ಗೆ ಸೇರಿದ್ದರು. ಈ ಯೋಧ ಪತ್ನಿ ಸಮೇತರಾಗಿ ಆಟೊದಲ್ಲಿ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದರು. ಆಟೊದಿಂದ ಇಳಿಯುವ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಅದರ ಚಕ್ರಕ್ಕೆ ಸಿಲುಕಿ ಯೋಧ ಮೃತಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.