ಬೆಳಗಾವಿ: ನಿಯಮಗಳನ್ನು ಪಾಲಿಸಬೇಕು ಎನ್ನುವ ಸಂಚಾರ ಪೊಲೀಸರ ಪಟ್ಟು ಹಾಗೂ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗಲು ಅವಕಾಶ ಕೊಡದಿರುವುದರಿಂದ ಆಟೊರಿಕ್ಷಾ ಮೊದಲಾದ ಶಾಲಾ ವಾಹನಗಳ ಚಾಲಕರು ಮತ್ತು ಮಾಲೀಕರು ಸಿಟ್ಟಾಗಿರುವ ಪರಿಣಾಮ, ಪೋಷಕರ ಜೇಬಿಗೆ ಕತ್ತರಿ ಬಿದ್ದಿದೆ.
ಹೌದು. ಜೂನ್ 27ರಿಂದ ಇಲ್ಲಿ ಮುಷ್ಕರ ನಡೆಸುತ್ತಿದ್ದ ಶಾಲಾ ವಾಹನಗಳ ಚಾಲಕರು ಶುಕ್ರವಾರದಿಂದ ಮಕ್ಕಳನ್ನು ಶಾಲೆಗಳಿಗೆ ಕರೆದುಕೊಂಡು ಹೋಗಲು ಶುರು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಹಾಗೂ ಮೋಟಾರು ವಾಹನ ಕಾಯ್ದೆ ಪ್ರಕಾರ ಆಟೊದಲ್ಲಿ 6 ಹಾಗೂ ವ್ಯಾನ್ನಲ್ಲಿ 10 ಮಕ್ಕಳನ್ನಷ್ಟೇ ಕರೆದೊಯ್ಯುವುದಕ್ಕೆ ಅವಕಾಶವಿದೆ. ಈ ನಿಯಮ ಪಾಲಿಸಲು ಕೊನೆಗೂ ಚಾಲಕರು ಮುಂದಾಗಿದ್ದಾರೆ. ಆದರೆ, ಬಾಡಿಗೆಯನ್ನು ದುಪ್ಪಟ್ಟು ಮಾಡಿದ್ದಾರೆ. ಇದು ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ.
ಆಟೊರಿಕ್ಷಾ ಹಾಗೂ ವ್ಯಾನ್ಗಳಲ್ಲಿನ ಬಾಡಿಗೆ ತಿಂಗಳ ಹಿಂದೆ ₹ 600 (ತಿಂಗಳಿಗೆ) ಇತ್ತು. ಇದನ್ನು ಈಚೆಗಷ್ಟೇ ₹ 700ಕ್ಕೆ ಹೆಚ್ಚಿಸಿದ್ದರು. ಇದೀಗ, ಮಕ್ಕಳ ಸಾಗಣೆ ಮಿತಿಯನ್ನು 6ಕ್ಕೆ ಇಳಿಸಿರುವುದರಿಂದ, ಕ್ರಮವಾಗಿ ₹ 1000 ಹಾಗೂ ₹ 1200ಕ್ಕೆ ಹೆಚ್ಚಿಸಿದ್ದಾರೆ. ‘ಕಡಿಮೆ ಸಂಖ್ಯೆಯ ಮಕ್ಕಳನ್ನಷ್ಟೇ ಕರೆದುಕೊಂಡು ಹೋಗಲು ಅವಕಾಶವಿದೆ. ಹೀಗಾಗಿ, ಬಾಡಿಗೆ ಹೆಚ್ಚಿಸುವುದು ಅನಿವಾರ್ಯವಾಗಿದೆ’ ಎನ್ನುವುದು ಚಾಲಕರ ವಾದವಾಗಿದೆ.
ಬಹುತೇಕ ಪೋಷಕರು, ದುಪ್ಪಟ್ಟು ಬಾಡಿಗೆ ನೀಡಲು ಅನಿವಾರ್ಯವಾಗಿ ಸಮ್ಮತಿಸಿದ್ದಾರೆ. ಕೆಲವರು, ತಮ್ಮ ವಾಹನಗಳಲ್ಲೇ ಮಕ್ಕಳನ್ನು ಕರೆದುಕೊಂಡು ಹೋಗುವುದು, ಕರೆತರುವುದು ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.