ADVERTISEMENT

ಬೆಳಗಾವಿ: ಶಿವಾಜಿ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದ ಎಂಇಎಸ್ ನಾಯಕಿಯರು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 6:50 IST
Last Updated 18 ಡಿಸೆಂಬರ್ 2021, 6:50 IST
ಶಿವಾಜಿ ಪ್ರತಿಮೆಗೆ ಹಾಲಿನ‌ ಅಭಿಷೇಕ ಮಾಡಿದ ಎಂಇಎಸ್ ನಾಯಕಿಯರು
ಶಿವಾಜಿ ಪ್ರತಿಮೆಗೆ ಹಾಲಿನ‌ ಅಭಿಷೇಕ ಮಾಡಿದ ಎಂಇಎಸ್ ನಾಯಕಿಯರು   

ಬೆಳಗಾವಿ: ನಿಷೇಧಾಜ್ಞೆ ಜಾರಿಯಲ್ಲಿರುವ ನಡುವೆಯೇ ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದ ಎದುರು ಎಂಇಎಸ್ ಕಾರ್ಯಕರ್ತರು ಗುಂಪು ಗುಂಪಾಗಿ ‌ಜಮಾಯಿಸಿ, ಶಿವಾಜಿ ಪರ ಜಯ ಘೋಷಣೆಗಳನ್ನು ಹಾಕುತ್ತಿದ್ದಾರೆ. ಅವರನ್ನು ತಡೆಯಲು ಹಾಗೂ ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಒಂದು ಗುಂಪನ್ನು ಅಲ್ಲಿಂದ ಕಳುಹಿಸಿದರೆ ಇನ್ನೊಂದು ‌ಗುಂಪು ಬರುತ್ತಿದೆ. ಈ ನಡುವೆ, ಶಿವಾಜಿ ಪ್ರತಿಮೆಗೆ ಎಂದಿನಂತೆ ಪೂಜೆ ಸಲ್ಲಿಸಬೇಕು ಎಂಬ ನೆಪ ಹೇಳಿಕೊಂಡು‌ ಬಂದ ಎಂಇಎಸ್ ನಾಯಕಿಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನಮ್ಮ ಧಾರ್ಮಿಕ ಭಾವನೆ ಗೌರವಿಸಿ, ನಾವು ಪೂಜೆ ಸಲ್ಲಿಸಿಯಷ್ಟೆ ವಾಪಸಾಗುತ್ತೇವೆ ಎಂದು ಪಟ್ಟು ಹಿಡಿದರು.

ಕೊನೆಗೂ ಅವರಿಗೆ ಪೊಲೀಸರು ಅವಕಾಶ ನೀಡಿದರು. ಗೇಟಿನ‌ ಬೀಗ ತೆಗೆದು, ಉದ್ಯಾನ ‌ಪ್ರವೇಶಕ್ಕೆ ಅನುವು ಮಾಡಿಕೊಟ್ಟರು.

ADVERTISEMENT

ನಾಯಕಿಯರಾದ ಸರಿತಾ ಪಾಟೀಲ, ರೇಣು ಕಿಲ್ಲೇಕರ ನೇತೃತ್ವದಲ್ಲಿ ಆರು ಮಹಿಳೆಯರು ಶಿವಾಜಿ ಪ್ರತಿಮೆಗೆ ಹಾಲಿನ‌ ಅಭಿಷೇಕ ಮಾಡಿದರು. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಳಿಕ ಉದ್ಯಾನದ ಒಳಕ್ಕೆ ಪ್ರವೇಶ ನೀಡುವಂತೆ ಆಗ್ರಹಿಸಿ ಬಿಜೆಪಿ ಮುಖಂಡ ಕಿರಣ ಜಾಧವ್ ಅವರು ಶ್ರೀರಾಮ ಸೇನೆ ಹಾಗೂ ಎಂಇಎಸ್ ಮುಖಂಡರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಅವರಲ್ಲೂ ಕೆಲವರನ್ನು ಪೊಲೀಸರು ‌ಉದ್ಯಾನದ ಒಳ ಹೋಗಲು‌ ಬಿಟ್ಟರು. ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬೆಳಗಾವಿಯ ಛತ್ರಪತಿ‌‌ ಶಿವಾಜಿ ಉದ್ಯಾನದ ‌ಬಳಿ ನೆರೆದಿದ್ದ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ‌ಸ್ಥಳದಿಂದ‌ ಕಳುಹಿಸಿದರು.
ಬೆಳಗಾವಿಯ ಕಪಿಲೇಶ್ವರ ಮೇಲ್ಸೇತುವೆಯಲ್ಲಿ‌ ಮೆರವಣಿಗೆಯಲ್ಲಿ ತೆರಳುತ್ತಿದ್ದ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ನಿಷೇಧಾಜ್ಞೆ ಜಾರಿ ಇರುವುದರಿಂದ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಿದರು. ಐವರಿಗಿಂತ ಜಾಸ್ತಿ ಜನ ಗುಂಪು ಸೇರಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.