
ಸವದತ್ತಿ: ಶತಮಾನಗಳ ಹಿಂದೆಯೇ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಚೌಡಯ್ಯನವರ ವಚನಗಳು ಇಂದಿಗೂ ಸಾರ್ವಕಾಲಿಕ ಸತ್ಯಗಳಾಗಿವೆ. ಅವರ ಜಯಂತಿಯ ಈ ಸಂದರ್ಭವು ಸಮಾನತೆ ಮತ್ತು ಕಾಯಕ ನಿಷ್ಠೆಯ ಮನೋಭಾವವನ್ನು ಹೆಚ್ಚಿಸಲಿ ಎಂದು ಕಾಂಗ್ರೆಸ್ ಮುಖಂಡ ಅಧ್ವಥ್ ವೈದ್ಯ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಜರುಗಿದ ನಿಜ ಶಿವಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಲ್ಲಿ ಅತ್ಯಂತ ನೇರ, ನಿಷ್ಠುರ, ವೈಚಾರಿಕ ಸಾಹಿತಿಯಾಗಿದ್ದವರ ಅಂಬಿಗರ ಚೌಡಯ್ಯನವರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಠ ವ್ಯಕ್ತಿತ್ವ ಇವರದಾಗಿತ್ತು. ವಚನಗಳ ಮೂಲಕವೇ ಸಮಾಜ ಸುಧಾರಣೆ ಶ್ರಮಿಸಿದ್ದರು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಮಾತನಾಡಿ, ಚೌಡಯ್ಯನವರ ಜಯಂತಿಯು ಇನ್ನೂ ಹೆಚ್ಚಿನದಾಗಿ ಅದ್ದೂರಿಯಿಂದ ಜರುಗಲಿ. ಸಮಸಮಾಜಕ್ಕೆ ವಚನ ನೀಡಿದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುತ್ತ ಸಮಾಜ ಮುಂದುವರೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಮಸಮಾಜ ಕಟ್ಟುವಿಕೆಯಲ್ಲಿ ಶಿವಶರಣರ ಪಾತ್ರ ಅಮೂಲಾಗ್ರವಾದದ್ದು. ತಮ್ಮ ಕಠೋರವಾದ ಮೂವತ್ತು ಪಡಿನುಡಿಗಳಿಂದ ಮೂಢ ನಂಬಿಕೆಗಳ ಅಂಧ ಆಚರಣೆಗಳಿಗೆ ಲಗಾಮು ಹಾಕಿ ಸುಭದ್ರ ಸಮಾನತೆಯ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾದವರು ಎಂದರು.
ವೇದಿಕೆಯಲ್ಲಿ ದೇವಸ್ಥಾನಕ್ಕೆ ಜಾಗೆ ನೀಡಲು ಶಾಸಕರ ಸಹೋದರ ಅಶ್ವಥ್ ವೈದ್ಯ ಅವರಿಗೆ ಸಮಾಜದಿಂದ ಮನವಿ ಸಲ್ಲಿಸಲಾಯಿತು. ಈ ಕುರಿತು ಅಶ್ವಥ್ ಅವರು ಸೂಕ್ತ ಕ್ರಮದ ಭರವಸೆ ನೀಡಿದರು.
ಅಜ್ಜಪ್ಪ ಸುಣಗಾರ, ಅನಿಲ ಸುಣಗಾರ, ಸುರೇಶ ಪೂಜಾರ, ಪಕ್ಕೀರಪ್ಪ ಪೂಜೇರ, ಬಸವರಾಜ ಕಪ್ಪಣ್ಣವರ, ಪಕ್ಕೀರಪ್ಪ ಸಂಗಪ್ಪನವರ, ರಾಜು ಅಂಬಿಗೇರ, ಜಿ.ಎಚ್. ಸುಣಗಾರ ಹಾಗೂ ಸಮಾಜದ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.