ADVERTISEMENT

‘ಏರ್‌ ಇಂಡಿಯಾ ಇದ್ದಿದ್ದರೆ ಸ್ಥಳಾಂತರ ಸುಲಭವಾಗುತ್ತಿತ್ತು: ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 13:19 IST
Last Updated 3 ಮಾರ್ಚ್ 2022, 13:19 IST

ಬೆಳಗಾವಿ: ‘ಈಗ ಏರ್‌ ಇಂಡಿಯಾ ವಿಮಾನಗಳಿದ್ದಿದ್ದರೆಉಕ್ರೇನ್‌ನಲ್ಲಿ ಸಿಲುಕಿರುವ ನಮ್ಮ ವಿದ್ಯಾರ್ಥಿಗಳನ್ನು ಸುಲಭವಾಗಿ ಕರೆಸಿಕೊಳ್ಳಬಹುದಿತ್ತು’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಉಕ್ರೇನ್‌ನಿಂದ ನಮ್ಮ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯುದ್ಧ ಆಗುತ್ತದೆ ಎಂದು 3 ತಿಂಗಳುಗಳ ಮುಂಚೆಯೇ ಗೊತ್ತಿದ್ದರೂ ಎಚ್ಚೆತ್ತುಕೊಳ್ಳಲಿಲ್ಲ’ ಎಂದು ಟೀಕಿಸಿದರು.

‘ಅದಕ್ಕಾಗಿಯೇ ಏರ್‌ ಇಂಡಿಯಾ ಮಾರಬೇಡಿ ಎಂದು ಹೇಳಿದ್ದೆವು. ನಮ್ಮ ವಿಮಾನಗಳಿದ್ದಿದ್ದರೆ, ದಿನಕ್ಕೆ 15 ವಿಮಾನಗಳನ್ನು ಕಳುಹಿಸಿದ್ದಿದ್ದರೆ 3 ದಿನಗಳಲ್ಲಿ ಎಲ್ಲರನ್ನೂ ಕರೆದುಕೊಂಡು ಬರಬಹುದಿತ್ತು. ಈಗ ವಿಮಾನಗಳಿಲ್ಲ. ಬಾಡಿಗೆ ಪಡೆಯಬೇಕಾಗಿದೆ. ನಾನೂ ಸಚಿವನಾಗಿದ್ದೆ, ಯಾವುದೇ ದೇಶದಲ್ಲಿ ನಮ್ಮವರು ಸಿಲುಕಿದರೆ ಏರ್‌ ಇಂಡಿಯಾ ವಿಮಾನದಲ್ಲಿ ಉಚಿತವಾಗಿ ಕರೆದುಕೊಂಡು ಬರುತ್ತಿದ್ದೆವು. ಯಾರಾದರೂ ಸತ್ತರೆ ಮೃತದೇಹದೊಂದಿಗೆ ಇಬ್ಬರು ಉಚಿತವಾಗಿ ಬರಬಹುದಿತ್ತು. ಆದರೆ ಈಗ?’ ಎಂದು ಹೇಳಿದರು.

ADVERTISEMENT

‘ಈಗಲಾದರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ಸದ್ಬುದ್ಧಿ ಕೊಡಲಿ. ಉಳಿದ ಎರಡು ವರ್ಷಗಳಲ್ಲಾದರೂ ದೇಶವನ್ನು ಹಳಿಗೆ ತರಲಿ ಎನ್ನುವ ಆಸೆ ಇದೆ’ ಎಂದರು.

‘ಇಲ್ಲಿ ಕೋಟಿ ಕೋಟಿ ಖರ್ಚು ಮಾಡಲಾಗೋಲ್ಲವೆಂದು ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುತ್ತಾರೆ. ಹಣ ಇಲ್ಲದವರು, ಕಡಿಮೆ ಶುಲ್ಕವಿರುವಲ್ಲಿ ಹೋಗುತ್ತಾರೆ. ಇಲ್ಲೇ ವಿದ್ಯಾಭ್ಯಾಸಸುಲಭವಾಗಿ ದೊರೆಯುವಂತೆ ಮಾಡಲಿ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.