
ಬೆಳಗಾವಿ: ಕಬ್ಬು ದರ ನಿಗದಿ ಕುರಿತು ಜಿಲ್ಲೆಯಲ್ಲಿ ರೈತರು ನಡೆಸುತ್ತಿದ್ದ ಹೋರಾಟ ಶುಕ್ರವಾರ ಗೊಂದಲದ ಗೂಡಾಯಿತು. ಒಬ್ಬೊಬ್ಬ ರೈತ ಮುಖಂಡರು ಒಂದೊಂದು ರೀತಿ ಹೇಳಿಕೆ ನೀಡಿದರು. ಹೋರಾಟ ನಿಲ್ಲಿಸಬೇಕೆ, ಬೇಡವೇ ಎಂಬ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಯಾರೂ ಹೇಳಲಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿದೆ ಎಂದರಿತು ಹಲವೆಡೆ ರೈತರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದರು. ಚಿಕ್ಕೋಡಿಯಲ್ಲಿ ಬಂದ್ ಮಾಡಿಸಿದರು. ಸಂಜೆ ವೇಳೆಗೆ, ‘₹3,300 ಕೊಡಲು ಕಾರ್ಖಾನೆಗಳು ಒಪ್ಪಿವೆ’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು. ಅದನ್ನು ಕೇಳಿ ಗುರ್ಲಾಪುರ ಸೇರಿದಂತೆ ಹಲವು ಕಡೆ ರೈತರು ವಿಜಯೋತ್ಸವ ಆಚರಿಸಿದರು.
ಸಭೆಯಲ್ಲಿ ಒಬ್ಬ ರೈತ ಮುಖಂಡರೂ ಪಾಲ್ಗೊಂಡಿರಲಿಲ್ಲ. ಚರ್ಚೆ ಏನು? ಸರ್ಕಾರದ ನಿರ್ಧಾರ ಏನು ಎಂಬ ಬಗ್ಗೆ ರೈತ ಮುಖಂಡರಿಗೆ ಮಾಹಿತಿ ಸಿಗಲಿಲ್ಲ. ಮಾತ್ರವಲ್ಲ; ಗುರ್ಲಾಪುರದಲ್ಲಿ 9 ದಿನಗಳಿಂದ ಬೃಹತ್ ಹೋರಾಟದ ನೇತೃತ್ವ ವಹಿಸಿದ್ದ ಮುಖಂಡರೂ ಗೊಂದಲಕ್ಕೀಡಾದರು.
‘ಟನ್ ಕಬ್ಬಿಗೆ ₹3,250 ದರ ಕೊಡಲು ಕಾರ್ಖಾನೆಗಳು ಒಪ್ಪಿವೆ. ಇದಕ್ಕೆ ರಾಜ್ಯ ಸರ್ಕಾರ ₹50 ಸೇರಿಸಿ ಒಟ್ಟು ₹3,300 ಸಿಗಲಿದೆ. ಹೋರಾಟಕ್ಕೆ ಜಯವಾಗಿದೆ. ಅಧ್ಯಕ್ಷರ ಆದೇಶದಂತೆ ಹೋರಾಟ ವಾಪಸು ಪಡೆಯುತ್ತೇವೆ’ ಎಂದು ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ‘ಪ್ರಜಾವಾಣಿ’ಗೆ ತಿಳಿಸಿದರು.
ಗುರೂಜಿ ಮಾತು ಆಲಿಸಿದ ರೈತರು ಸಂಭ್ರಮ ಆರಂಭಿಸಿದರು. ಪರಸ್ಪರ ಹೊತ್ತು ಕುಣಿದರು. ಪಟಾಕಿ ಸಿಡಿಸಿ, ಗುಲಾಲು ಎರಚಿ, ಮಾಲೆ– ಶಾಲು ಹಾಕಿ ಮುಖಂಡರನ್ನು ಅಭಿನಂದಿಸಿದರು.
‘ಗುರ್ಲಾಪುರದಲ್ಲಿ ಹೋರಾಟ ಅಂತ್ಯವಾಗಿದೆ. ಟೆಂಟ್ಗಳ ತೆರವು ಮಾಡುತ್ತೇವೆ. ರಾತ್ರಿಯೇ ಹೆದ್ದಾರಿ ಸಂಚಾರಕ್ಕೆ ಅನುವು ಮಾಡುತ್ತೇವೆ’ ಎಂದು ಪೊಲೀಸ್ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಇನ್ನೊಂದೆಡೆ, ‘ಸರ್ಕಾರದಿಂದ ಅಧಿಕೃತ ಮಾಹಿತಿ ಬರಬೇಕು. ಅಲ್ಲಿಯವರೆಗೆ ನಮ್ಮ ನಿರ್ಧಾರ ತಿಳಿಸುವುದು ಕಷ್ಟ’ ಎಂದು ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದರು.
ಅತ್ತ ಚಿಕ್ಕೋಡಿಯಲ್ಲಿ ರೈತರ ಹೋರಾಟ ಬೆಂಬಲಿಸಿ ಸಾರ್ವಜನಿಕರೂ ಬಂದ್ ನಡೆಸಿದರು. ಕೆಲವು ವರ್ತಕರು ಅಂಗಡಿ ಬಂದ್ ಮಾಡಿದರು. ಮತ್ತೆ ಕೆಲವನ್ನು ಪ್ರತಿಭಟನಕಾರರೇ ಬಂದ್ ಮಾಡಿಸಿದರು.
ಸರ್ಕಾರದ ಸಂಧಾನ ಸಭೆ ವಿಫಲವಾಗಿದೆ ಎಂದು ಕೆಲವರು ಶನಿವಾರ (ನ.8) ಬೈಲಹೊಂಗಲ ಬಂದ್ಗೆ ಕರೆ ನೀಡಿದರು. ಚನ್ನಮ್ಮನ ಕಿತ್ತೂರಿನಲ್ಲೂ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಗಳನ್ನು ಬಂದ್ ಮಾಡಿದರು.
ಕಲ್ಲು ತೂರಾಟ: 8 ವಾಹನ ಜಖಂ
ಪೊಲೀಸರಿಗೆ ಗಾಯ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಬಳಿ ರೈತರು ನಡೆಸಿದ ಹೋರಾಟ ಶುಕ್ರವಾರ ಸಂಘರ್ಷಕ್ಕೆ ಎಡೆ ಮಾಡಿತು. ಹೆದ್ದಾರಿ ಬಂದ್ಗೆ ಮುಂದಾದ ರೈತರನ್ನು ಪೊಲೀಸರು ತಳ್ಳಿದರು. ಉದ್ರಿಕ್ತರು ಕಲ್ಲು ತೂರಾಟ ನಡೆಸಿದರು. 8 ವಾಹನಗಳು ಜಖಂಗೊಂಡವು. ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆದ ಕಾರಣ ರೈತರು ಶಾಂತವಾಗಿಯೇ ಪ್ರತಿಭಟಿಸುತ್ತಿದ್ದರು. ರೈತರು ಕೇಳಿದ ದರ ನೀಡಲು ಕಾರ್ಖಾನೆಗಳವರು ಒಪ್ಪಿಲ್ಲ ಎಂಬ ಮಾಹಿತಿ ಜಿಲ್ಲೆಯಲ್ಲಿ ಹರಡಿತು. ರೊಚ್ಚಿಗೆದ್ದ ರೈತರು ಕೆಲವು ಕಡೆ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಬಂದರು. ಹತ್ತರಗಿ ಟೋಲ್ನಾಕಾ ಬಳಿ ಹೆದ್ದಾರಿ ಬಂದ್ಗೆ ಮುಂದಾದರು. ಪೊಲೀಸರು ಆಸ್ಪದ ನೀಡಲಿಲ್ಲ. ಆಗ ಕೋಪಗೊಂಡ ಕೆಲವರು ವಾಹನಗಳಿಗೆ ಕಲ್ಲು ತೋರಿದರು. ಕೆಎಸ್ಆರ್ಟಿಸಿಯ ನಾಲ್ಕು ಬಸ್ ಹಾಗೂ ನಾಲ್ಕು ಖಾಸಗಿ ವಾಹನಗಳ ಗಾಜು ಒಡೆದವು. ಡಿಎಸ್ಪಿ ಮಹಾಂತೇಶ ಸಜ್ಜನ ಸಿಪಿಐ ಜಾವೇದ ಮುಷಾಪುರಿ ಇಎಸ್ಐ ಬಿ.ಎಲ್.ರಾಠೋಡ್ ಬಿ.ಆರ್.ಕಾಮಗೌಡರ ಹಾಗೂ ಪರಶುರಾಮ ಗಾಡಿವಡ್ಡರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಮುಖಂಡರ ಸಭೆ
ಇಂದು ‘ಶುಕ್ರವಾರದ ಬೆಳವಣಿಗೆಗಳೂ ಗೊಂದಲಕಾರಿ ಆಗಿವೆ. ಸಂಯುಕ್ತ ಕಿಸಾನ್ ಮೋರ್ಚಾ ನಿಯೋಗ ಬೆಳಗಾವಿಗೆ ಬಂದಿದೆ. ಇದರ ಆರು ಮುಖಂಡರು ಸಂಯುಕ್ತ ಹೋರಾಟ ಕರ್ನಾಟಕದ ನಾಯಕರ ಜತೆಗೆ ಶನಿವಾರ (ನ.8) ಚರ್ಚಿಸಲಿದ್ದಾರೆ’ ನಡೆಸಲಿದ್ದಾರೆ’ ಎಂದು ನಿಯೋಗದ ಸದಸ್ಯ ಸಿದಗೌಡ ಮೋದಗಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಾಯಕರಾದ ಬಡಗಲಪುರ ನಾಗೇಂದ್ರ ಸಿರಿಮನೆ ನಾಗರಾಜ ಡಿ.ಎಚ್.ಪೂಜಾರ ಗೋಪಾಲ ಪಾಪೇಗೌಡ ವಸಂತಗೌಡ ಹಾಗೂ ನಾನು ನಿಯೋಗದಲ್ಲಿ ಇದ್ದೇವೆ. ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.