ರಾಮದುರ್ಗ: ‘ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವುದರಿಂದ ಸಾರ್ವಜನಿಕರು ಹೆಚ್ಚು ಜಾಗೃತವಾಗಿರಬೇಕು‘ ಎಂದು ಸಿಪಿಐ ವಿನಾಯಕ ಬಡಿಗೇರ ಹೇಳಿದರು.
ಕಟಕೋಳದ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದ ಗ್ರಾಮ ದೇವಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 15 ವರ್ಷಗಳ ನಂತರ ಮೇ 27 ರಿಂದ ಜಾತ್ರೆ ನಡೆಯಲಿದ್ದು, ಉತ್ತಮ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಕು’ ಎಂದರು.
ಜಾತ್ರೆಯ ಸಂದರ್ಭದಲ್ಲಿ ಸುಮಾರು 50 ಜನ ಸ್ವಯಂ ಸೇವಕರನ್ನು ನೇಮಿಸಿಕೊಂಡು ಪೊಲೀಸರೊಂದಿಗೆ ಸಹಕಾರಿಸಬೇಕು. ಎಲ್ಲ ಸಮಾಜದವರು ಸೌಹಾರ್ದತೆಯಿಂದ ಜಾತ್ರೆ ಆಚರಿಸಿ ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಬೇಕು’ ಎಂದರು.
ಕಟಕೋಳ ಪಿಎಸ್ಐ ಬಸವರಾಜ ಕೊಣ್ಣೂರೆ ಮಾತನಾಡಿ, ಜಾತ್ರೆಯ ಸಮಯದಲ್ಲಿ ಪ್ರಾಣಿವಧೆ ಮಾಡಬಾರದು. ಸಾರ್ವಜನಿಕರಿಗೆ, ಮಹಿಳೆಯರಿಗೆ ಭಂಡಾರ ಎರಚಬಾರದು. ಡಿಜೆ ಮೆರವಣಿಗೆ ಮಾಡಕೂಡದು. ಅನುಮತಿ ಇಲ್ಲದೆ ಕಾರ್ಯಕ್ರಮ ಧ್ವನಿ ವರ್ಧಕ ಹಚ್ಚಬಾರದು. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಸಬಾರದು ಎಂದೂ ಸೂಚಿಸಿದರು.
ಸಾರ್ವಜನಿಕರು ಸಲಹೆ ನೀಡಿದರು. ಕಟಕೋಳ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾರ್ವತಿ ಪಾಟೋಳಿ, ಬಿ.ಎ.ದೇಸಾಯಿ, ರಾವಸಾಹೇಬಗೌಡ ಪೋಲಿಸಪಾಟೀಲ, ಅಪರಾಧ ವಿಭಾಗದ ಪಿಎಸ್ಐ ಎಂ.ಎಸ್.ಬಡಿಗೇರ, ಪಿಡಿಒ ಎಂ.ಬಿ.ಬೈಲವಾಡ, ಹೆಸ್ಕಾಂ ಅಧಿಕಾರಿ ಶ್ರೀಕಾಂತ ಕಾಂಬಳೆ ಸೇರಿದಂತೆ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.