ಬೆಳಗಾವಿ: ‘ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಚಳವಳಿಯು ರೈತರ ಹೋರಾಟವಾಗಿ ಉಳಿದಿಲ್ಲ. ಅದು ಪ್ರಾಯೋಜಿತವಾಗಿದೆ’ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಬಿಜೆಪಿ ರಾಜ್ಯ ರೈತ ಮೋರ್ಚಾ ಆಧ್ಯಕ್ಷ ಈರಣ್ಣ ಕಡಾಡಿ ಟೀಕಿಸಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಚಳವಳಿಯನ್ನು ಕಾಂಗ್ರೆಸ್ ನಾಯಕರು ಹೈಜಾಕ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಎತ್ತಿ ಕಟ್ಟುತ್ತಿದ್ದಾರೆ’ ಎಂದು ಆರೋಪಿಸಿದರು.
‘ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪಿಸಲು ಕಾಂಗ್ರೆಸ್ನವರ ಬಳಿ ಯಾವುದೇ ವಿಚಾರ ಇಲ್ಲ. ಆದ್ದರಿಂದ ಮುಗ್ಧ ರೈತರ ಹೆಗಲ ಮೇಲೆ ಬಂದೂಕಿಟ್ಟು ಸರ್ಕಾರದ ಮೇಲೆ ಗುರಿ ಇಟ್ಟಿದ್ದಾರೆ. ಕಾಯ್ದೆಗಳಲ್ಲಿ ಯಾವ ಅಂಶ ಒಳ್ಳೆಯದಿಲ್ಲ ಎನ್ನುವುದನ್ನು ಮನವರಿಕೆ ಮಾಡುವಲ್ಲಿ ರೈತ ಸಂಘಟನೆಗಳವರು ಹಾಗೂ ಕಾಂಗ್ರೆಸ್ನವರು ವಿಫಲವಾಗಿದ್ದಾರೆ. ಕಾಯ್ದೆಯನ್ನು ಸಂಪೂರ್ಣವಾಗಿ ವಾಪಸ್ ಪಡೆಯುವಂತೆ ಆಗ್ರಹಿಸಿದರೆ ಸಂಸತ್ತಿಗೆ ಗೌರವ ಉಳಿಯುತ್ತದೆಯೇ?’ ಎಂದು ಕೇಳಿದರು.
‘ಕೇವಲ ಹರಿಯಾಣ, ಪಂಜಾಬ್ ರೈತರು ಪ್ರತಿಭಟಿಸಿದರೆ ಇಡೀ ದೇಶದ ರೈತರೆಲ್ಲರೂ ಪ್ರತಿಭಟಿಸಿದಂತಲ್ಲ. ದೆಹಲಿಯ ಗಡಿಯಲ್ಲಿ ನಡೆದಿರುವ ರೈತರ ಪ್ರತಿಭಟನೆಯನ್ನು ರಾಜ್ಯದ ರೈತ ಸಂಘಟನೆಗಳು ಏಕೆ ಬೆಂಬಲಿಸುತ್ತಿವೆ ಎನ್ನುವುದನ್ನು ತಿಳಿಸಬೇಕು. ಸಂಘಟನೆಗಳ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟವೇ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.
‘ಕಾಯ್ದೆಯಲ್ಲಿ ಏನಾದರೂ ತಪ್ಪಿದ್ದಲ್ಲಿ ಆ ಆಂಶ ವಾಪಸ್ ಪಡೆಯಲಾಗುವುದು ಎಂದು ಸರ್ಕಾರ ಈಗಾಗಲೇ ಹೇಳಿದೆ. ಹೀಗಿದ್ದರೂ ಪ್ರತಿಭಟಿಸಿ, ಜನಸಾಮಾನ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.