ಬೆಂಗಳೂರು: ಬಿಳೇಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಸಾಫ್ಟ್ವೇರ್ ಉದ್ಯೋಗಿ ಶೈಲೇಂದ್ರ ರಘುವಂಶಿ ಅವರ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾನುವಾರ ನಡೆಯಿತು.
ರಘುವಂಶಿ ಅವರು ಶುಕ್ರವಾರ ರಾತ್ರಿ ಮೊಬೈಲ್ ಚಾರ್ಜ್ಗೆ ಹಾಕಿಕೊಂಡು, ಇಯರ್ ಫೋನ್ ಮೂಲಕ ವಿಡಿಯೊ ನೋಡುತ್ತಿರುವಾಗಲೇ ಸತ್ತಿದ್ದರು. ಹೀಗಾಗಿ ವಿದ್ಯುತ್ ಪ್ರವಹಿಸಿರಬಹುದು ಎಂದು ಶಂಕಿಸಲಾಗಿತ್ತು.
ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ‘ವಿದ್ಯುತ್ ಪ್ರವಹಿಸಿದೆ ಎಂಬುದು ಖಚಿತವಾಗಿಲ್ಲ. ಬೇರೆ ಕಾಯಿಲೆ ಅಥವಾ ಇನ್ನಿತರೆ ಕಾರಣಗ ಳಿಂದ ಸಾವು ಸಂಭವಿಸಿರುವ ಸಾಧ್ಯತೆ ಇದೆ’ ಎಂದು ಪೊಲೀಸರಿಗೆ ಮೌಖಿಕ ಹೇಳಿಕೆ ಕೊಟ್ಟಿದ್ದಾರೆ. ಅನುಮಾನ ಬಗೆಹರಿಸಿಕೊಳ್ಳಲು ಪೊಲೀಸರು ವೈದ್ಯಕೀಯ ವರದಿಯನ್ನು ರೋಗ ಪತ್ತೆ ಪರೀಕ್ಷೆಗೆ (ಪೆಥಾಲಜಿ) ಕಳುಹಿಸಿದ್ದಾರೆ.
‘ವಿದ್ಯುತ್ ಪ್ರವಹಿಸಿದ್ದರೆ ದೇಹದ ಯಾವುದಾದರೂ ಭಾಗದಲ್ಲಿ ಸಣ್ಣ ಗುರುತಾದರೂ ಉಳಿದುಕೊಳ್ಳುತ್ತದೆ. ದೇಹ ದಲ್ಲಿ ಅಂಥ ಯಾವುದೇ ಗುರುತು ಪತ್ತೆ ಯಾಗಿಲ್ಲ’ ಎಂದು ವೈದ್ಯರು ಹೇಳಿದ್ದಾರೆ.
ರಘುವಂಶಿ ಬಳಸಿದ್ದ ಚಾರ್ಜರ್, ಇಯರ್ ಫೋನ್, ಸ್ವಿಚ್ ಬೋರ್ಡನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬರಲು ಕನಿಷ್ಠ 15 ದಿನ ಬೇಕು ಎಂದು ಪೊಲೀಸರು ಹೇಳಿದ್ದಾರೆ. ‘ಪತಿಗೆ ಯಾವುದೇ ಕಾಯಿಲೆಗಳು ಇರಲಿಲ್ಲ. ಅವರು ಆರೋಗ್ಯವಾಗಿಯೇ ಇದ್ದರು’ ಎಂದು ಮೃತರ ಪತ್ನಿ ದಿವ್ಯಾ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.