ಬೆಂಗಳೂರು: `ಸಾಮಾಜಿಕ ಸಮಾನತೆಯ ಹರಿಕಾರರಾದ ಬಸವಣ್ಣನವರ ತತ್ವ, ಆದರ್ಶಗಳು ಇಂದು ಸಪ್ತಸಾಗರದಾಚೆಗೂ ಹರಡಬೇಕಾದ ಅವಶ್ಯಕತೆ ಬಂದೊದಗಿದೆ. ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಬಸವಧರ್ಮ ಪೀಠ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದೆ~ ಎಂದು ಮಾತೆ ಮಹಾದೇವಿ ಅವರು ಹೇಳಿದರು.
ಬಸವಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವದಳ ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತಿಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
`ದೇವರು ನಮಗೆ ಎರಡು ಕೈಗಳನ್ನು ನೀಡಿದ್ದು, ಒಂದು ನಮ್ಮ ಕುಟುಂಬದ ನಿರ್ವಹಣೆಗಾದರೆ, ಇನ್ನೊಂದು ದುಡಿಮೆ ಮಾಡಿ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ಅಣ್ಣ ಬಸವಣ್ಣ ಕರೆ ನೀಡಿದ್ದರು. ಆ ತತ್ವಗಳ ಅನುಷ್ಠಾನ ಇಂದು ಆಗಬೇಕಿದೆ~ ಎಂದರು.
ಸಂಸದ ಡಿ.ಬಿ.ಚಂದ್ರೇಗೌಡ ಮಾತನಾಡಿ, `ಇಂದಿನ ರಾಜಕಾರಣಿಗಳು ರಾಜಕೀಯದಲ್ಲಿ ಬಸವಣ್ಣನವರನ್ನು ಅನುಸರಿಸಬೇಕು. ಅವರು ಹೇಳಿರುವ ತತ್ವಗಳನ್ನು ಅಳವಡಿಸಿಕೊಳ್ಳಬೇಕು~ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ನೆ.ಲ.ನರೇಂದ್ರಬಾಬು, ಯಶವಂತಪುರ ತರಕಾರಿ ಮಾರುಕಟ್ಟೆ ಅಧ್ಯಕ್ಷ ಬಸವರಾಜು ತಿಂಡ್ಲು, ಬಿಬಿಎಂಪಿ ಸದಸ್ಯ ಕೃಷ್ಣಪ್ಪ ಮತ್ತಿತರರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.