ದಾಬಸ್ಪೇಟೆ: ಇಲ್ಲಿನ ಕಂಬಾಳು ಗ್ರಾಮದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆಭಾನುವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ಧರಬೆಟ್ಟದ ಷಣ್ಮುಖ ಸ್ವಾಮೀಜಿ, ‘ಶರಣ ಪರಂಪರೆಯ ಮಹಾಸಂತ ಶಿವಕುಮಾರ ಸ್ವಾಮೀಜಿಯವರು ಭೌತಿಕವಾಗಿ ನಮ್ಮೊಳಗಿಲ್ಲ. ನಾಡಿನ ಜನರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆಯೂರಿರುವುದಕ್ಕೆ, ಅವರಿಲ್ಲದ ಮಠಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಿರುವುದು ತೋರಿಸುತ್ತದೆ’ ಎಂದರು.
ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಮಠ ಕಟ್ಟಿ, ಅಲ್ಲಿ ಲಕ್ಷಾಂತರ ಮಕ್ಕಳಿಗೆ ಅನ್ನ ನೀಡಿ, ಅಕ್ಷರ ಕಲಿಸಿ ಅವರನ್ನು ಸತ್ಪ್ರಜೆಗಳಾಗಿ ಮಾಡಿದ ಮಹಾನುಭಾವರು. 9 ದಶಕಗಳ ಕಾಲ ಮಠದ ಪೀಠಾಧಿಪತಿಗಳಾಗಿ, ವಿಶ್ವಮಟ್ಟಕ್ಕೆ ಕೊಂಡೊಯ್ದ ಪುಣ್ಯಪುರುಷ. ಇಂತಹವರು ನಮ್ಮ ನಾಡಿನಲ್ಲಿ ಜನಿಸಿರುವುದು ಯಾವುದೋ ಕಾಲದ ಸೌಭಾಗ್ಯ’ ಎಂದರು.
‘ಶ್ರೀಗಳು ಕಂಬಾಳು ಮತ್ತು ಹಲವು ಗ್ರಾಮಗಳೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದ್ದರು. ಇಲ್ಲಿನ ಭಕ್ತರು ಸಹ ಇವರನ್ನು ನಡೆದಾಡುವ ದೇವರೆಂದೇ ಭಾವಿಸಿ ಭಕ್ತಿ ಸಮರ್ಪಿಸುತ್ತಿದ್ದರು. ಅವರಿಲ್ಲದಿದ್ದರೂ ಈಗಿನ ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿಯವರಿಗೆ ಅದೇ ಗೌರವ, ನಿಷ್ಠೆಯನ್ನು ತೋರಿಸುತ್ತೇವೆ’ ಎಂದು ಲೇಖಕ ವಿರುಪಾಕ್ಷಯ್ಯ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.