ADVERTISEMENT

ವಾಹನಗಳಿಗೆ ಇಂಡಿಕೇಟರ್‌ ಬಳಸದಿದ್ದರೆ ₹500 ದಂಡ: ರವಿಕಾಂತೇಗೌಡ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 22:11 IST
Last Updated 9 ಏಪ್ರಿಲ್ 2021, 22:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ವಾಹನಗಳ ಸೈಡ್ ಮಿರರ್ ಹಾಗೂ ಇಂಡಿಕೇಟರ್‌ ಉಪಯೋಗಿಸದಿದ್ದರಿಂದ ನಗರದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಪ್ರತಿಯೊಂದು ವಾಹನಗಳಲ್ಲೂ ಸೈಡ್‌ ಮಿರರ್‌ ಹಾಗೂ ಇಂಡಿಕೇಟರ್‌ ಬಳಸಬೇಕು. ತಪ್ಪಿದರೆ, ಅಂಥವರ ವಿರುದ್ಧ ಮುಂದಿನ ದಿನಗಳಲ್ಲಿ ಪ್ರಕರಣ ದಾಖಲಿಸಿಕೊಂಡು ₹500 ದಂಡ ವಿಧಿಸಲಾಗುವುದು’ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಸಂಚಾರ ನಿಯಮ ಪಾಲನೆ ಹಾಗೂ ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ಕೇವಲ ಪೊಲೀಸರ ಕರ್ತವ್ಯವಲ್ಲ, ಪ್ರತಿಯೊಬ್ಬ ನಾಗರಿಕರ ಕರ್ತವ್ಯ’ ಎಂದಿದ್ದಾರೆ.

‘ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸುವುದು, ವಾಹನಗಳಲ್ಲಿರುವ ಸೈಡ್‌ ಮಿರರ್ ಹಾಗೂ ಇಂಡಿಕೇಟರ್‌ ಬಳಸದಿರುವುದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ ಹೊಸ ಉಪಕ್ರಮವನ್ನು ಕೈಗೊಳ್ಳಲಾಗುತ್ತಿದೆ’ ಎಂದೂ ಹೇಳಿದ್ದಾರೆ.

ADVERTISEMENT

‘ದ್ವಿಚಕ್ರ ವಾಹನಗಳಿಂದ ನಗರದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ದ್ವಿಚಕ್ರ ವಾಹನ ಸವಾರರೇ ಹೆಚ್ಚಿನ ಸಂಖ್ಯೆಯಲ್ಲೇ ಮೃತಪಡುತ್ತಿದ್ದಾರೆ. ಹಿಂದೆ ಬರುವ ವಾಹನಗಳನ್ನು ಕನ್ನಡಿಯಲ್ಲಿ ನೋಡದೇ, ವಾಹನ ಚಲಾಯಿಸುವಾಗ ಇಂಡಿಕೇಟರ್ ಸಿಗ್ನಲ್‌ ಕೊಡದೇ ಚಾಲಕರು/ಸವಾರರು ಮುಂದಕ್ಕೆ ಹೋಗುತ್ತಿದ್ದಾರೆ. ಹಿಂದೆ ಬರುವವರಿಗೆ ಗೊಂದಲವಾಗಿ ಅಪಘಾತಗಳು ಸಂಭವಿಸುತ್ತಿವೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.