ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡದ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಪುನಃ ಆದೇಶ ಹೊರಡಿಸಿದ್ದು, ಶನಿವಾರ ಒಂದೇ ದಿನ ₹ 72.66 ಲಕ್ಷ ದಂಡ ಸಂಗ್ರಹವಾಗಿದೆ.
ದಂಡದ ಮೇಲಿನ ರಿಯಾಯಿತಿಗೆ ಜನರಿಂದ ಉತ್ತಮ ಸ್ಪಂದನ ವ್ಯಕ್ತವಾಗಿದ್ದರಿಂದ, ಅದರ ಅವಧಿಯನ್ನು ಮಾರ್ಚ್ 4ರಿಂದ ಮಾರ್ಚ್ 18ರವರೆಗೆ ವಿಸ್ತರಿಸಲಾಗಿದೆ.
‘ಫೆ. 3ರಿಂದ 11ರವರೆಗೆ ರಿಯಾಯಿತಿಯಡಿ ದಂಡ ಪಾವತಿಸಿಕೊಳ್ಳಲಾಗಿತ್ತು. ಇದೀಗ, ರಿಯಾಯಿತಿಗೆ ಪುನಃ ಅವಕಾಶ ನೀಡಲಾಗಿದೆ. ಶನಿವಾರ 25,334 ಪ್ರಕರಣಗಳು ಇತ್ಯರ್ಥಗೊಂಡಿವೆ’ ಎಂದು ಸಂಚಾರ ಪೊಲೀಸರು ತಿಳಿಸಿದರು. ‘ಸಂಚಾರ ನಿಯಮ ಉಲ್ಲಂಘನೆ ದಂಡ ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕರು, ಕರ್ನಾಟಕ ರಾಜ್ಯ ಪೊಲೀಸ್ ಆ್ಯಪ್ ಅಥವಾ ಪೇಟಿಎಂ ಆ್ಯಪ್ ಮೂಲಕ ಪಾವತಿಸಬಹುದು. ಕರ್ನಾಟಕ ಒನ್, ಬೆಂಗಳೂರು ಒನ್, ಸಮೀಪದ ಸಂಚಾರ ಠಾಣೆ ಹಾಗೂ ಸಂಚಾರ ನಿರ್ವಹಣಾ ಕೇಂದ್ರದಲ್ಲೂ (ಟಿಎಂಸಿ) ದಂಡ ಪಾವತಿಸಲು ಅವಕಾಶವಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.