ಬೆಂಗಳೂರು: ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಅಪಘಾತವನ್ನುಂಟು ಮಾಡಿದ್ದ ಆರೋಪದಡಿ ಚಾಲಕ ಅಕ್ಷಯ್ ಎಂಬುವವರ ವಿರುದ್ಧ ಬನಶಂಕರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆರೋಪಿ ಅಕ್ಷಯ್, ನಟಿ ತಾರಾ ಹಾಗೂ ಅವರ ಪತಿ ವೇಣುಗೋಪಾಲ್ ಬಳಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅ. 29ರಂದು ನಡೆದಿದ್ದ ಅಪಘಾತದ ಸಂಬಂಧ ಬಿ.ವಿ. ಗಿರೀಶ್ ಎಂಬುವರು ದೂರು ನೀಡಿದ್ದಾರೆ. ಅದರನ್ವಯ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರ ಗಿರೀಶ್, ಬನಶಂಕರಿ 3ನೇ ಹಂತದ ಕತ್ರಿಗುಪ್ಪೆ ಸಿಗ್ನಲ್ನಲ್ಲಿ ತಮ್ಮ ಕಾರು (ಕೆಎ 03 ಎಂಸಿ 42378) ನಿಲ್ಲಿಸಿದ್ದರು. ಅದೇ ಮಾರ್ಗವಾಗಿ ಬಂದಿದ್ದ ಚಾಲಕ ಗಿರೀಶ್, ನಿರ್ಲಕ್ಷ್ಯದಿಂದ ಕಾರು (ಕೆಎ 05 ಎಂಎನ್ 6226) ಚಲಾಯಿಸಿದ್ದ. ಇದರಿಂದಾಗಿ ಅಕ್ಷಯ್ ಕಾರು, ಗಿರೀಶ್ ಅವರ ಕಾರಿಗೆ ಡಿಕ್ಕಿ ಹೊಡೆದಿತ್ತು.’
‘ಅಪಘಾತವನ್ನು ಗಿರೀಶ್ ಪ್ರಶ್ನಿಸಿದ್ದರು. ದುರಸ್ತಿ ಮಾಡಿಸಿಕೊಡುವುದಾಗಿ ಅಕ್ಷಯ್ ಭರವಸೆ ನೀಡಿ ಸ್ಥಳದಿಂದ ಹೊರಟು ಹೋಗಿದ್ದ. ಹಲವು ದಿನಗಳಾದರೂ ದುರಸ್ತಿ ಮಾಡಿಸಿಕೊಡದಿದ್ದರಿಂದ ಗಿರೀಶ್ ದೂರು ನೀಡಿದ್ದಾರೆ. ಆರೋಪಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಅಕ್ಷಯ್ ಚಲಾಯಿಸುತ್ತಿದ್ದ ಕಾರಿನಲ್ಲಿ ನಟಿ ತಾರಾ ಇದ್ದರೆಂಬ ಮಾಹಿತಿ ಇದೆ. ಅದಿನ್ನೂ ಖಚಿತವಾಗಿಲ್ಲ’ ಎಂದೂ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.