ಬೆಂಗಳೂರು: ಹೊರವರ್ತುಲ ರಸ್ತೆಯ ಚಂದ್ರಾಲೇಔಟ್ ತಂಗುದಾಣ ಬಳಿ ಕಾರು ಹಾಗೂ ಬಿಎಂಟಿಸಿ ಬಸ್ ನಡುವೆ ಸೋಮವಾರ ಅಪಘಾತ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡು ಕಾರು ಹೊತ್ತಿ ಉರಿದಿದೆ.
‘ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅಪಘಾತದಿಂದ ಕಾರು ಸಂಪೂರ್ಣ ಸುಟ್ಟಿದೆ. ಬಸ್ ಚಾಲಕ ಗೌರೀಶ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಬಿಎಂಟಿಸಿ ಘಟಕ 26ಕ್ಕೆ ಸೇರಿದ್ದ ಬಿಎಂಟಿಸಿ ಬಸ್, ಯಶವಂತಪುರದಿಂದ ನಾಯಂಡಹಳ್ಳಿ ಕಡೆಗೆ ಹೊರವರ್ತುಲ ರಸ್ತೆ ಮೂಲಕ ಹೊರಟಿತ್ತು. ಚಂದ್ರಾಲೇಔಟ್ ತಂಗುದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ಬಸ್ ನಿಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅತೀ ವೇಗವಾಗಿ ಬಂದಿದ್ದ ಕಾರು, ಬಸ್ಗೆ ಡಿಕ್ಕಿ ಹೊಡೆದಿತ್ತು.
‘ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೆಲ ನಿಮಿಷಗಳಲ್ಲಿ ಬೆಂಕಿ ಕೆನ್ನಾಲಗೆ ಹೆಚ್ಚಾಗಿತ್ತು. ಕಾರು ಧಗ ಧಗ ಉರಿಯಲಾರಂಭಿಸಿತ್ತು. ಅಪಾಯದ ಮುನ್ಸೂಚನೆ ಅರಿತ ಬಸ್ ಚಾಲಕ, ಸ್ವಲ್ಪ ದೂರಕ್ಕೆ ಬಸ್ ಚಲಾಯಿಸಿಕೊಂಡು ಹೋಗಿದ್ದರು. ನಂತರ, ಪ್ರಯಾಣಿಕರು ಕಾರಿನಿಂದ ಸುರಕ್ಷಿತವಾಗಿ ಇಳಿದಿದ್ದಾರೆ. ಬಸ್ನ ಹಿಂಬದಿ ಸೀಟುಗಳು ಸುಟ್ಟಿವೆ’ ಎಂದು ಪೊಲೀಸರು ತಿಳಿಸಿದರು.
‘ನಿರ್ವಾಹಕ ಹಾಗೂ ಚಾಲಕ, ಬಸ್ನಲ್ಲಿದ್ದ ಅಗ್ನಿನಂದಕ ಸಹಾಯದಿಂದ ಸ್ವಲ್ಪ ಬೆಂಕಿ ನಂದಿಸಿದ್ದರು. ಬಸ್ ಅನ್ನು ಕಾರಿನಿಂದ ದೂರಕ್ಕೆ ತೆಗೆದುಕೊಂಡು ಹೋಗದಿದ್ದರೆ, ಬಸ್ ಸಹ ಸುಡುತ್ತಿತ್ತು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.