ADVERTISEMENT

ಐದನೇ ಬಾರಿ ಜೈಲಿಗೆ: ಶೌಚಾಲಯದಲ್ಲಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 19:45 IST
Last Updated 16 ಮೇ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮನೋಜ್ ಅಲಿಯಾಸ್ ಹೂವು (23) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

‘ಅಪರಾಧ ಹಿನ್ನೆಲೆಯುಳ್ಳ ಮನೋಜ್‌ನನ್ನು ಇತ್ತೀಚೆಗಷ್ಟೇ ಬಂಧಿಸಿದ್ದ ಚಾಮರಾಜಪೇಟೆ ಪೊಲೀಸರು, ಮೇ 1ರಂದು ಕಾರಾಗೃಹಕ್ಕೆ ಬಿಟ್ಟಿದ್ದರು. ಜೈಲಿನ ಬ್ಯಾರಕ್‌ನಲ್ಲಿರುವ ಶೌಚಾಲಯದಲ್ಲಿ ಶನಿವಾರ ಮನೋಜ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಕಾರಾಗೃಹ ಮೂಲಗಳು ಹೇಳಿವೆ.

‘ರಾತ್ರಿ ಸಮಯದಲ್ಲಿ ಧರಿಸಲೆಂದು ಮನೋಜ್‌ಗೆ ಪ್ಯಾಂಟ್‌ ನೀಡಲಾಗಿತ್ತು ಅದರ ದಾರದಿಂದಲೇ ಆತ, ಶೌಚಾಲಯದಲ್ಲಿರುವ ಹುಕ್‌ಗೆ ನೇಣು ಹಾಕಿಕೊಂಡಿದ್ದ. ಶೌಚಾಲಯಕ್ಕೆ ಹೋಗಿದ್ದ ಸಹ ಕೈದಿಗಳು, ಮನೋಜ್‌ನನ್ನು ನೋಡಿ ಸಿಬ್ಬಂದಿ ಮಾಹಿತಿ ನೀಡಿದ್ದರು’ ಎಂದೂ ತಿಳಿಸಿವೆ.

ADVERTISEMENT

ಐದನೇ ಬಾರಿ ಜೈಲಿಗೆ: ‘ಸುಲಿಗೆ ಹಾಗೂ ಇತರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮನೋಜ್‌, ಮೇ 1ರಂದು ಐದನೇ ಬಾರಿ ಜೈಲಿಗೆ ಬಂದಿದ್ದ. ನಾಲ್ಕು ಬಾರಿ ಜಾಮೀನು ಕೊಡಿಸಿದ್ದ ಸಂಬಂಧಿಕರು, ಪುನಃ ಜಾಮೀನು ಕೊಡಿಸಲು ಸಹಾಯ ಮಾಡಿರಲಿಲ್ಲ. ಇದರಿಂದ ಮನೋಜ್‌ ನೊಂದಿದ್ದನೆಂದು ಗೊತ್ತಾಗಿದೆ’ ಎಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಮೂಲಗಳು ಹೇಳಿವೆ.

‘ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಮನೋಜ್‌ನ ತಾಯಿ, ಪೊಲೀಸರು ತಮಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದರು. ತಾಯಿ, ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಕ್ಕೆ ಪದೇ ಪದೇ ಅಲೆದಾಡುತ್ತಿದ್ದುದ್ದು ಮನೋಜ್‌ಗೆ ನೋವನ್ನುಂಟು ಮಾಡಿತ್ತು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.