ಬೆಂಗಳೂರು: ರಸ್ತೆಯಲ್ಲಿ ಮಹಿಳೆಯರನ್ನು ಅಡ್ಡಗಟ್ಟಿ ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ವಿಭಾಗ ವ್ಯಾಪ್ತಿಯ ತಲಘಟ್ಟಪುರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಓಜೇನಹಳ್ಳಿ ಗ್ರಾಮದ ಪ್ರಸನ್ನಕುಮಾರ್ (38) ಅಲಿಯಾಸ್ ಪ್ರಸನ್ನ ಹಾಗೂ ಜೆ.ಪಿ.ನಗರದ ಕೊತ್ತನೂರು ದಿಣ್ಣೆ ಮುಖ್ಯರಸ್ತೆಯ ನಿವಾಸಿ ದಯಾನಂದ್ (39) ಬಂಧಿತರು.
‘ಬಂಧಿತರಿಂದ ₹2.75 ಲಕ್ಷ ಮೌಲ್ಯದ 44 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿಕೊಂಡಿದ್ದ ಬೈಕ್ವೊಂದನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಮಾರ್ಚ್ 12ರಂದು ಬೆಳಿಗ್ಗೆ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ನಡೆದು ತೆರಳುತ್ತಿದ್ದರು. ಅವರನ್ನು ಅಡಗಟ್ಟಿದ ಇಬ್ಬರು ಅಪರಿಚಿತರು ಚಿನ್ನದ ಸರ ಕಸಿದು ಪರಾರಿಯಗಿದ್ದರು. ಮಹಿಳೆ ನೀಡಿದ್ದ ದೂರು ಆಧರಿಸಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಕೃತ್ಯ ನಡೆದ ಸ್ಥಳದಿಂದ 20 ಕಿ.ಮೀ. ಅಂತರದಲ್ಲಿ ಅಳವಡಿಸಲಾಗಿರುವ 85 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.