ಬೆಂಗಳೂರು: ಕ್ರೆಸೆಂಟ್ ರಸ್ತೆಯಲ್ಲಿ ಮರದ ಕೊಂಬೆ ಬಿದ್ದು ರಿಸಿತಾ ವಿಜಯ್ (39) ಎಂಬುವರು ಗಾಯಗೊಂಡಿದ್ದಾರೆ. ಈ ಸಂಬಂಧ ಆ ಮರದಲ್ಲಿ ಕೇಬಲ್ ಅಳವಡಿಸಿರುವ ಕಂಪನಿಗಳ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
‘ಮರಕ್ಕೆ ದೊಡ್ಡ ಗಾತ್ರದ ಕೇಬಲ್ಗಳನ್ನು ಅಳವಡಿಸಲಾಗಿದ್ದು, ಅದರ ಭಾರ ಹೆಚ್ಚಾಗಿ ಕೊಂಬೆ ಮುರಿದು ಬಿದ್ದಿದ್ದರಿಂದಲೇ ಪತ್ನಿ ರಿಸಿತಾ ಅವರು ಗಾಯಗೊಂಡಿರುವುದಾಗಿ ಪತಿ ವಿಜಯಕೃಷ್ಣ ಯಾದವ್ ದೂರು ನೀಡಿದ್ದಾರೆ’ ಎಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ಹೇಳಿದರು.
‘ಕ್ರೆಸೆಂಟ್ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲೊಂದರ ಮುಂದೆ ಇದೇ 10ರಂದು ರಿಸಿತಾ ನಡೆದುಕೊಂಡು ಹೊರಟಿದ್ದರು. ಅದೇ ಸಂದರ್ಭದಲ್ಲೇ ಮರದ ಕೊಂಬೆ ಅವರ ಮೇಲೆ ಬಿದ್ದಿತ್ತು. ತಲೆ, ಭುಜ ಹಾಗೂ ಎರಡೂ ಕಾಲುಗಳಿಗೆ ಪೆಟ್ಟಾಗಿತ್ತು. ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಂಡಿದ್ದಾರೆ.’
‘ಸಾರ್ವಜನಿಕ ಸ್ಥಳದಲ್ಲಿ ಪ್ರಾಣಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ಕೇಬಲ್ ಅಳವಡಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳೂ ಆ ಬಗ್ಗೆ ಗಮನಹರಿಸದೇ ಕರ್ತವ್ಯಲೋಪ ಎಸಗಿರುವುದಾಗಿ ವಿಜಯಕೃಷ್ಣ ದೂರಿದ್ದಾರೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.