ಪೊಲೀಸ್ (ಸಾಂಧರ್ಭಿಕ ಚಿತ್ರ)
– ಪ್ರಜಾವಾಣಿ ಚಿತ್ರ
ಬೆಂಗಳೂರು: ಮಾಜಿ ಸಂಸದರೊಬ್ಬರ ಸಹೋದರಿಯೆಂದು ಚಿನ್ನಾಭರಣ ಮಳಿಗೆ ಮಾಲೀಕನಿಗೆ ₹8.41 ಕೋಟಿ ಸಾಲ ಪಡೆದು ವಂಚಿಸಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಿಗೆ ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಆರೋಪಿ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಹರೀಶ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಮತ್ತೊಂದೆಡೆ ಪ್ರಕರಣದಲ್ಲಿ ಮಾಜಿ ಸಂಸದರ ಧ್ವನಿಯಲ್ಲಿ ಮಾತನಾಡಿದ್ದ ನಟ ಧರ್ಮೇಂದ್ರ ನಾಪತ್ತೆೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿ ಮಾಲೀಕರಾದ ವನಿತಾ ಎಸ್.ಐತಾಳ್ ಎಂಬವರು ನೀಡಿದ ದೂರಿನ ಮೇರೆಗೆ ಐಶ್ವರ್ಯಾ ಗೌಡ, ಈಕೆಯ ಪತಿ ಹರೀಶ್, ಚಿತ್ರನಟ ಧರ್ಮ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಬೆದರಿಕೆ ಆರೋಪದ ಅಡಿ ಚಂದ್ರಾಲೇಔಟ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
‘ಆರ್.ಆರ್.ನಗರ ನಿವಾಸಿಗಳಾದ ಶ್ವೇತಾಗೌಡ ಹಾಗೂ ಹರೀಶ್ ಪರಿಚಿತರು. ಐಶ್ವರ್ಯಾ ಗೌಡ ಅವರು ಮಾಜಿ ಸಂಸದರೊಬ್ಬರ ಸಹೋದರಿ ಎಂದು ನನಗೆ ನಂಬಿಸಿದ್ದರು. ಅನೇಕ ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ. ನಾನು ದೊಡ್ಡ ಉದ್ಯಮಿ ಎಂದು ನನ್ನ ಚಿನ್ನದಂಗಡಿಯಲ್ಲಿ ಹಲವು ಬಾರಿ ಚಿನ್ನಾಭರಣ ಸಾಲ ಪಡೆದುಕೊಂಡು ಹಣ ವಾಪಸ್ ನೀಡಿದ್ದರು. ಇದನ್ನು ನಂಬಿ ನಾನು ಆರೋಪಿ ಕೇಳಿದಾಗ ಚಿನ್ನಾಭರಣ ಸಾಲ ನೀಡಿದ್ದೆ. ಈವರೆಗೂ ಆ ಹಣವನ್ನು ವಾಪಸ್ ನೀಡಿಲ್ಲ’ ಎಂದು ಆರೋಪಿಸಿ ವನಿತಾ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.