ADVERTISEMENT

ಐದು ಅಪ್ಪು ಎಕ್ಸ್‌ಪ್ರೆಸ್‌ ಅಂಬುಲೆನ್ಸ್‌ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 3:12 IST
Last Updated 27 ಮಾರ್ಚ್ 2023, 3:12 IST
‘ಅಪ್ಪು ಎಕ್ಸ್‌ಪ್ರೆಸ್‌’ ಆಂಬುಲೆನ್ಸ್‌ಗಳನ್ನು ನಟ ಪ್ರಕಾಶ್‌ರಾಜ್‌ ಅವರು ವಿವಿಧ ಆಸ್ಪತ್ರೆಗಳ ಮುಖ್ಯಸ್ಥರಿಗೆ ಹಸ್ತಾಂತರಿಸಿದರು
‘ಅಪ್ಪು ಎಕ್ಸ್‌ಪ್ರೆಸ್‌’ ಆಂಬುಲೆನ್ಸ್‌ಗಳನ್ನು ನಟ ಪ್ರಕಾಶ್‌ರಾಜ್‌ ಅವರು ವಿವಿಧ ಆಸ್ಪತ್ರೆಗಳ ಮುಖ್ಯಸ್ಥರಿಗೆ ಹಸ್ತಾಂತರಿಸಿದರು   

ಬೆಂಗಳೂರು: ಪ್ರಕಾಶ್‌ರಾಜ್‌ ಫೌಂಡೇಷನ್‌ ಹಾಗೂ ಸಿನಿಮಾ ಪ್ರಮುಖರ ಸಂಸ್ಥೆಗಳ ಸಹಯೋಗದಲ್ಲಿ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ‘ಅಪ್ಪು ಎಕ್ಸ್‌ಪ್ರೆಸ್‌’ ಹೆಸರಿನ ಐದು ಆಂಬುಲೆನ್ಸ್‌ಗಳನ್ನು ಹಸ್ತಾಂತರಿಸಲಾಯಿತು.

ನಟ ಪ್ರಕಾಶ್‌ರಾಜ್‌ ಅವರು ವಿವಿಧ ಆಸ್ಪತ್ರೆಗಳ ಮುಖ್ಯಸ್ಥರಿಗೆ ಈ ಅಂಬುಲೆನ್ಸ್‌ಗಳನ್ನು ಹಸ್ತಾಂತರಿಸಿದರು.

‘ಅಪ್ಪು ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರಿಸಿದರೆ ಮಾತ್ರ ಅವರು ನಮ್ಮ ಜತೆಗಿದ್ದಂತೆ ಆಗುತ್ತದೆ. ಈ ಆಶಯದಿಂದ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಅಪ್ಪು ಹೆಸರಿನ
ಆಂಬುಲೆನ್ಸ್‌ ಇರಬೇಕು ಎಂದು ಉದ್ದೇಶಿಸಿದ್ದೇವೆ. ಮೊದಲ ಆಂಬುಲೆನ್ಸ್‌ನ್ನು ಮೈಸೂರಿಗೆ ನೀಡಿದ್ದೆವು. ಆ ಕಾರ್ಯದ ಮುಂದುವರಿದ ಭಾಗವಾಗಿ ಇನ್ನೂ ಐದು ಅಂಬುಲೆನ್ಸ್‌ಗಳನ್ನು ನೀಡಿದ್ದೇವೆ’ ಎಂದು ಪ್ರಕಾಶ್‌ರಾಜ್‌ ವಿಡಿಯೋ ಸಂದೇಶದಲ್ಲಿ
ಹೇಳಿದ್ದಾರೆ.

ADVERTISEMENT

‘ಈ ಬಾರಿ ಬೀದರಿನ ಗುರು ನಾನಕ್ ಆಸ್ಪತ್ರೆ, ಕಲಬುರಗಿ ಜಿಲ್ಲೆ ಚಿತ್ತಾಪುರದ ಡಾ.ಓಂ ಇಂಡೋ ಜರ್ಮನ್ ಆಸ್ಪತ್ರೆ, ಉಡುಪಿಯ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ, ಕೊಳ್ಳೇಗಾಲದ ‘ಹೋಲಿ ಕ್ರಾಸ್ ಕಾನ್ವೆಂಟ್ ಆಸ್ಪತ್ರೆ’ ಮತ್ತು ಕೊಪ್ಪಳದ ಗವಿಸಿದ್ಧೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ಅಂಬುಲೆನ್ಸ್ ಹಸ್ತಾಂತರಿಸಿದ್ದೇವೆ’ ಎಂದಿದ್ದಾರೆ.

‘ಈ ಬಾರಿ ಪ್ರಕಾಶ್ ರಾಜ್ ಫೌಂಡೇಶನ್ ಜೊತೆಗೆ ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಮೂಲಕ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ, ತಮಿಳು ನಟ ಸೂರ್ಯ ಅವರು ತಮ್ಮ 2ಡಿ ಎಂಟರ್ಟೈನ್ಮೆಂಟ್ ಮೂಲಕ. ನಟ ಯಶ್ ಅವರು ತಮ್ಮ ಸಂಸ್ಥೆ
‘ಯಶೋಮಾರ್ಗ’ದ ಮೂಲಕ, ನಿರ್ಮಾಪಕರಾದ ವೆಂಕಟ್ ಅವರು ತಮ್ಮ ಕೆವಿಎನ್ ಫೌಂಡೇಶನ್ ಮೂಲಕ ಈ ಕಾರ್ಯಕ್ಕೆ ಬೆಂಬಲ ನೀಡಿದ್ದಾರೆ’ ಎಂದು ಪ್ರಕಾಶ್‌ರಾಜ್‌ ಕೃತಜ್ಞತೆ ಅರ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.