ADVERTISEMENT

ಬೆಂಗಳೂರು: ಮುಂಬೈನಿಂದ ಪಿಸ್ತೂಲ್ ತಂದು ಮಾರಾಟ, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 19:31 IST
Last Updated 8 ನವೆಂಬರ್ 2022, 19:31 IST
ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳಿಂದ ಜಪ್ತಿ ಮಾಡಿರುವ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳು
ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳಿಂದ ಜಪ್ತಿ ಮಾಡಿರುವ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳು   

ಬೆಂಗಳೂರು: ಮುಂಬೈನಿಂದ ನಾಡ ಪಿಸ್ತೂಲ್‌ಗಳನ್ನು ಖರೀದಿಸಿ ತಂದು ನಗರದಲ್ಲಿ ಮಾರುತ್ತಿದ್ದ ರೌಡಿ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಮಹಮ್ಮದ್ ಅರಾಫತ್ ಹಾಗೂ ಮಹಮ್ಮದ್ ಸಾದತ್ ಮಾಝ್ ಬಂಧಿತರು. ಇವರಿಂದ ನಾಡ ಪಿಸ್ತೂಲ್ ಹಾಗೂ ನಾಲ್ಕು ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಹೆಣ್ಣೂರು ಠಾಣೆಯ ರೌಡಿ ಪಟ್ಟಿಯಲ್ಲಿ ಅರಾಫತ್ ಹೆಸರಿದೆ. ಈತ, ಹಲವು ಪ್ರಕರಣಗಳಲ್ಲಿ ಜೈಲಿಗೂ ಹೋಗಿಬಂದಿದ್ದ. ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಪಿಸ್ತೂಲ್ ಮಾರಾಟಕ್ಕೆ ಇಳಿದಿದ್ದ.’

ADVERTISEMENT

‘ಸಹಚರ ಸಾದತ್‌ ಜೊತೆ ಸೇರಿ ಮುಂಬೈನಿಂದ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ತರಿಸುತ್ತಿದ್ದ ರೌಡಿ, ಬೆಂಗಳೂರಿನಲ್ಲಿ ಹಲವರಿಗೆ ಮಾರುತ್ತಿದ್ದ. ಪ್ರತಿ ಪಿಸ್ತೂಲ್‌ಗೆ ₹ 10 ಸಾವಿರದಿಂದ ₹ 25 ಸಾವಿರ ಬೆಲೆ ನಿಗದಿಪಡಿಸಿದ್ದ. ರೌಡಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರು ಪಿಸ್ತೂಲ್ ಖರೀದಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರ್‌.ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಆರೋಪಿಗಳು, ಪಿಸ್ತೂಲ್ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು. ಇವರಿಗೆ ಪಿಸ್ತೂಲ್ ನೀಡುತ್ತಿದ್ದ ಮುಂಬೈನ ವ್ಯಕ್ತಿಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.