ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಆಟೊ ಕಳ್ಳತನ ಮಾಡುತ್ತಿದ್ದ ಆರೋಪಿ ರಘು ಅಲಿಯಾಸ್ ಮಾರಿಗುಡಿ (35) ಎಂಬುವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ನಂದಿನಿ ಲೇಔಟ್ ನಿವಾಸಿ ರಘು, ಟೆಂಟ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ವೇಳೆ ನಗರದಲ್ಲಿ ಸುತ್ತಾಡಿ ಆಟೊ ಕದಿಯುತ್ತಿದ್ದ. ಈತನಿಂದ ಎರಡು ಆಟೊ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಮದ್ಯವ್ಯಸನಿಯಾಗಿದ್ದ ಈತನ ಕಿರುಕುಳದಿಂದ ಬೇಸತ್ತು ಪತ್ನಿ ದೂರವಾಗಿದ್ದಳು. ಈತನಿಗೆ ಬರುತ್ತಿದ್ದ ಸಂಬಳ, ಖರ್ಚಿಗೆ ಸಾಲುತ್ತಿರಲಿಲ್ಲ. ಇದೇ ಕಾರಣಕ್ಕೆ ಆಟೊ ಕದ್ದು, ಅದನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ’ ಎಂದು ತಿಳಿಸಿದರು.
‘ಶಂಕರನಗರದ ಬಿಬಿಎಂಪಿ ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿದ್ದ ಆಟೊವನ್ನು ಜುಲೈ 29ರಂದು ಆರೋಪಿ ಕದ್ದಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಕದ್ದ ಆಟೊದಲ್ಲೇ ಆರೋಪಿ ವಿಧಾನಸೌಧ ಲೇಔಟ್ ವೃತ್ತದಲ್ಲಿ ಹೊರಟಿದ್ದ. ಗಸ್ತಿನಲ್ಲಿದ್ದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನದ ವಿಷಯ ಬಾಯ್ಬಿಟ್ಟ’ ಎಂದೂ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.