ADVERTISEMENT

ಪೌರಕಾರ್ಮಿಕರು ನಗರದ ಸ್ವಚ್ಛತಾ ಸೈನಿಕರು: ಮೇಯರ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 19:35 IST
Last Updated 12 ಜನವರಿ 2019, 19:35 IST
ಮೇಯರ್ ಗಂಗಾಂಬಿಕೆ ಅವರು ಸರ್ಕಾರಿ ಯೋಜನೆಗಳ ಕೈಪಿಡಿ ಬಿಡುಗಡೆ ಮಾಡಿದರು. ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ, ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಉಪನಿರ್ದೇಶಕಿ ಡಾ. ಟಿ.ಸಿ ಪೂರ್ಣಿಮಾ ಮತ್ತಿತರರು ಇದ್ದಾರೆ
ಮೇಯರ್ ಗಂಗಾಂಬಿಕೆ ಅವರು ಸರ್ಕಾರಿ ಯೋಜನೆಗಳ ಕೈಪಿಡಿ ಬಿಡುಗಡೆ ಮಾಡಿದರು. ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ, ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಉಪನಿರ್ದೇಶಕಿ ಡಾ. ಟಿ.ಸಿ ಪೂರ್ಣಿಮಾ ಮತ್ತಿತರರು ಇದ್ದಾರೆ   

ಬೆಂಗಳೂರು: ಪೌರಕಾರ್ಮಿಕರು ನಿಜವಾದ ಅರ್ಥದಲ್ಲಿ ನಗರದ ಸ್ವಚ್ಛತಾ ಸೈನಿಕರುಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಬಣ್ಣಿಸಿದರು.

ಕೆಂಗೇರಿ ಉಪನಗರದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ರಾಜರಾಜೇಶ್ವರಿ ನಗರ ವಲಯದ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛತಾ ಅಭಿಯಾನ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌರಕಾರ್ಮಿಕರು ಕಸ ಸಂಗ್ರಹಣೆ ಮಾಡುವುದರೊಂದಿಗೆ ಜನರಲ್ಲಿ ಅರಿವು ಮೂಡಿಸುವ ನೈತಿಕ ಹೊಣೆಗಾರಿಕೆ ಹೊತ್ತರೆ ಕಸದ ಸಮಸ್ಯೆ ಪರಿಹಾರಕ್ಕೆ ಮತ್ತಷ್ಟು ವೇಗ ದೊರಕಲಿದೆ ಎಂದರು.

ADVERTISEMENT

‘ಪ್ರೀತಿಯಿಂದ ಹಣ ನೀಡಿದರೆ ಹಣ ಸ್ವೀಕರಿಸಿ. ಒತ್ತಾಯ ಮಾಡಿ ಪಡೆದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಕಾರ್ಮಿಕರಿಗೆ ಎಚ್ಚರಿಕೆ ನೀಡಿದರು.

ನಗರವನ್ನು ಸುಂದರವಾಗಿಡಬೇಕೆಂಬ ನೈತಿಕ ಜವಾಬ್ದಾರಿ ಜನರಲ್ಲೇ ಮೂಡಬೇಕು. ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿರುವ ವಲಸಿಗರಲ್ಲೂ ಇದು ನನ್ನ ಊರು ಎಂಬ ಭಾವನೆ ಮೂಡಬೇಕು. ಆಗ ಮಾತ್ರ ತ್ಯಾಜ್ಯ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದು ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಉಪನಿರ್ದೇಶಕಿ ಡಾ.ಟಿ.ಸಿ ಪೂರ್ಣಿಮಾ ತಿಳಿಸಿದರು. ಪುನರ್ ಬಳಕೆ ಹಾಗೂ ಮರುಬಳಕೆ ಪದ್ಧತಿಯಿಂದ ಕಸದ ಸಮಸ್ಯೆಗೆ ಕೊಂಚ ಮಟ್ಟಿಗೆ ಇತಿಶ್ರೀ ಹಾಡಬಹುದು ಎಂದು ಹೇಳಿದರು.

ಬೆಂಗಳೂರು ಸ್ವಚ್ಛತಾ ರ‍್ಯಾಂಕ್‌ ಪಟ್ಟಿಯಲ್ಲಿ ಬೆಂಗಳೂರು 216ನೇ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಪಟ್ಟಿಯಲ್ಲಿ ಹತ್ತರ ಒಳಗಿನ ಸ್ಥಾನವನ್ನು ಪಡೆಯಲಿದ್ದೇವೆ ಎಂದು ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತ ಎಚ್.ಬಾಲಶೇಖರ್ ಭರವಸೆ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ನಿಯಮಿತವಾಗಿ ವೈದ್ಯಕೀಯ ಶಿಬಿರ ಆಯೋಜಿಸಬೇಕು ಎಂದು ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.