ADVERTISEMENT

ಎರಡನೇ ಪತ್ನಿ ಮೇಲೆ ಸಿಟ್ಟು, ಮಲಮಗನ ಕೊಲೆ: ಬಂಧನ

ಆಶ್ರಮದ ಶಾಲೆಯಿಂದ ಅಪಹರಣ * ಬಾಗಲೂರು ಪೊಲೀಸರಿಂದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 23:43 IST
Last Updated 12 ಮಾರ್ಚ್ 2023, 23:43 IST
ಸಂಪತ್‌ಕುಮಾರ್
ಸಂಪತ್‌ಕುಮಾರ್   

ಬೆಂಗಳೂರು: ಚೊಕ್ಕನಹಳ್ಳಿಯ ಆಶ್ರಮವೊಂದರ ಶಾಲೆಯಿಂದ 11 ವರ್ಷದ ಬಾಲಕ ಚೇತನ್ ರೆಡ್ಡಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಡಿ ಜಿ.ಸಂಪತ್ ಕುಮಾರ್ (35) ಎಂಬುವವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

‘ಕೆಜಿಎಫ್‌ ಕೃಷ್ಣರಾಜಪುರ ನಿವಾಸಿ ಸಂಪತ್ ಕುಮಾರ್, ಫೆ.20ರಂದು ಬಾಲಕನ ಅಪಹರಿಸಿ ಕ್ಯಾಸಂಬಳ್ಳಿ ಬಳಿಯ ಕೆರೆಗೆ ತಳ್ಳಿ ಕೊಲೆ ಮಾಡಿದ್ದ. ಅ‍ಪಹರಣ ದೂರಿನ ತನಿಖೆಗೆ ಸಂಬಂಧಿಸಿ ಈತನ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಾಲಕ ಚೇತನ್, ಕೆಜಿಎಫ್‌ ಐವಾರಹಳ್ಳಿಯ ಪ್ರವೀಣ್‌ಕುಮಾರ್ – ಪುಷ್ಪಾವತಿ ದಂಪತಿ ಮಗ. ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಪುಷ್ಪಾವತಿ, ಆರೋಪಿಯನ್ನು 2021ರಲ್ಲಿ ಎರಡನೇ ಮದುವೆಯಾಗಿದ್ದರು. ಸಂಪತ್‌ಗೂ ಇದು ಎರಡನೇ ಮದುವೆಯಾಗಿತ್ತು.’

ADVERTISEMENT

‘ಅತ್ತ, ವಿಚ್ಛೇದನದ ನಂತರ ಮಗನ ಪಾಲನೆ ಹೊಣೆ ಹೊತ್ತಿದ್ದ ಪ್ರವೀಣ್‌ಕುಮಾರ್, ಆತನನ್ನು ಆಶ್ರಮದ ಶಾಲೆಗೆ ಸೇರಿಸಿದ್ದರು. ಪುಷ್ಪಾವತಿ ಹಾಗೂ ಸಂಪತ್ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಈ ಮಧ್ಯೆ ‘ಸಂಪತ್ 2ನೇ ಪತ್ನಿ ಪುಷ್ಪಾವತಿ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ. ಬೇಸತ್ತ ಪುಷ್ಪಾವತಿ, ಮನೆ ಬಿಟ್ಟು ಹೋಗಿದ್ದು, ಇದರಿಂದ ಸಿಟ್ಟಾಗಿದ್ದ’ ಎಂದರು.

‘ಮನೆ ಬಿಟ್ಟು ಹೋಗಿದ್ದ 2ನೇ ಪತ್ನಿಯನ್ನು ಬೆದರಿಸಿ ವಾಪಸು ಕರೆತರಲು ಬಾಲಕನ ಅಪಹರಿಸಿದ್ದೆ. ಆಕೆ ಮೊಬೈಲ್‌ಗೆ ಸಂಪರ್ಕಕ್ಕೆ ಸಿಗದಿದ್ದರಿಂದ ಸಿಟ್ಟಾಗಿ ಬಾಲಕನ ಕೆರೆಗೆ ತಳ್ಳಿದೆ’ ಎಂದು ಆರೋಪಿ ಹೇಳಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.