ADVERTISEMENT

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಶಾಸಕ ಎಸ್. ಮುನಿರಾಜು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 23:49 IST
Last Updated 14 ಫೆಬ್ರುವರಿ 2026, 23:49 IST
ಬಾಗಲಗುಂಟೆಯ ಬಿಡಬ್ಲ್ಯುಎಸ್ಎಸ್‌ಬಿ ಕಚೇರಿಯಲ್ಲಿ ಎಸ್. ಮುನಿರಾಜು ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು
ಬಾಗಲಗುಂಟೆಯ ಬಿಡಬ್ಲ್ಯುಎಸ್ಎಸ್‌ಬಿ ಕಚೇರಿಯಲ್ಲಿ ಎಸ್. ಮುನಿರಾಜು ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು   

ಪೀಣ್ಯ ದಾಸರಹಳ್ಳಿ: ‘ಬೇಸಿಗೆ ಶುರುವಾಗಲಿದೆ. ನೀರಿನ ಸಮಸ್ಯೆ ಯಾವ ಕಡೆಯೂ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ವಾರ್ಡ್‌ ಮಟ್ಟದಲ್ಲಿ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆ ಮಾಡಬೇಕು’ ಎಂದು ಶಾಸಕ ಎಸ್. ಮುನಿರಾಜು ಸೂಚನೆ ನೀಡಿದರು.

ಎಂಎಐ ಬಡಾವಣೆಯ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಕಚೇರಿಯಲ್ಲಿ ಅವರು ಅಧಿಕಾರಿಗಳ ಸಭೆ ನಡೆಸಿದರು.

‘ಕೆಲವೊಂದು ಪ್ರದೇಶಗಳಲ್ಲಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಬಂದಿವೆ. ವಾಟರ್‌ಮನ್‌ಗಳು ನಿರ್ಮಾಣ ಹಂತದ ಕಟ್ಟಡಗಳಿಗೆ ಮತ್ತು ತಮಗೆ ಬೇಕಾದವರಿಗೆ ನೀರು ಪೂರೈಕೆ ಮಾಡುತ್ತಿರುವ ಬಗ್ಗೆಯೂ ದೂರುಗಳಿವೆ. ಅನುಮತಿ ಇಲ್ಲದೆ, ಕಾವೇರಿ ಮೀಟರ್ ಹಾಕಿಸಿಕೊಳ್ಳದೇ ನೀರು ಪೂರೈಕೆ ಮಾಡುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಸೂಚಿಸಿದರು.

ADVERTISEMENT

ಕಾವೇರಿ ನೀರನ್ನು ವಾರಕ್ಕೆ ಮೂರು ದಿನ ಸಮರ್ಪಕವಾಗಿ ಪೂರೈಕೆ ಮಾಡಬೇಕು. ಕಾವೇರಿ ನೀರಿನ ಮೀಟರ್‌ ಹಾಕಿಸಿಕೊಂಡಿಲ್ಲದವರು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಎಷ್ಟು ಕೊಳವೆಬಾವಿಗಳು ಕೆಲಸ ಮಾಡುತ್ತಿವೆ? ಎಷ್ಟು ಬತ್ತಿ ಹೋಗಿವೆ? ದುರಸ್ತಿ ಮಾಡಲು ಸಾಧ್ಯ ಇರುವ ಕೊಳವೆಬಾವಿಗಳು ಎಷ್ಟು ಇವೆ ಎಂಬ ಮಾಹಿತಿ ನೀಡಬೇಕು ಎಂದರು.

ಬಿಡಬ್ಲ್ಯುಎಸ್ಎಸ್‌ಬಿ ಹೆಚ್ಚುವರಿ ಮುಖ್ಯ ಎಂಜಿನಿಯರ್ ದೇವರಾಜು, ಕಾರ್ಯಪಾಲಕ ಎಂಜಿನಿಯರ್ ಹರಿನಾಥ್, ಎಇಇ ನಾಗರಾಜು, ಮಂಜುನಾಥ್ ಮತ್ತು ಕೊಳವೆಬಾವಿ ವಿಭಾಗದ ಎಇಇ ಆಶಾ, ಎಇ ಕಾರ್ತಿಕ್ ಮತ್ತು ಇನ್‌ಸ್ಪೆಕ್ಟರ್‌ಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.